ಆಡಳಿತ ನ್ಯಾಯಾಧೀಕರಣದಲ್ಲಿ ತರಬೇತಿ: ಪರಿಶಿಷ್ಟ ವರ್ಗದ ಕಾನೂನು ಪದವೀಧರರಿಂದ ಅರ್ಜಿ ಆಹ್ವಾನ
ಚಿತ್ರದುರ್ಗ
ಆಡಳಿತ ನ್ಯಾಯಾಧೀಕರಣದಲ್ಲಿ ತರಬೇತಿ ನೀಡಲು ಪರಿಶಿಷ್ಟ ವರ್ಗದ ಕಾನೂನು ಪದವೀಧರರನ್ನು ಆಯ್ಕೆ ಮಾಡಬೇಕಾಗಿರುವುದರಿಂದ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಫೆ.16 ಅರ್ಜಿ ಸಲ್ಲಿಸಲು ಕೊನೆಯ ದಿನ.
ಪರಿಶಿಷ್ಟ ಪಂಗಡದ ಕಾನೂನು ಪದವೀಧರರಿಗೆ ಆಡಳಿತ ನ್ಯಾಯಾಧೀಕರಣದ ವೃತ್ತಿಯ ಪ್ರಾಯೋಗಿಕ ತರಬೇತಿ ಕಾರ್ಯಕ್ರಮದಡಿ ಮಾಸಿಕ ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಲು ನಿಗಧಿಪಡಿಸಿರುವ ಕಾಲಮಿತಿಯ ಬದಲು ವರ್ಷದ ಎಲ್ಲ ದಿನಗಳಲ್ಲೂ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
2026ರ ಜನವರಿ 27 ರಿಂದ ಫೆಬ್ರವರಿ 16ರವರೆಗೆ ಆನ್ಲೈನ್ tw.kar.nic.in ನಲ್ಲಿ ಸಲ್ಲಿಸಿರುವ ಅರ್ಜಿಗಳನ್ನು ಜಿಲ್ಲಾ ಪರಿಶಿಷ್ಟ ವರ್ಗಗಳವರ ಕಚೇರಿ, ಚಿತ್ರದುರ್ಗ ಇಲ್ಲಿಗೆ ಸಲ್ಲಿಸಲು 2026ರ ಫೆಬ್ರವರಿ 16 ಕೊನೆಯ ದಿನವಾಗಿದೆ.
ಷರತ್ತುಗಳು:
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಪರಿಶಿಷ್ಟ ವರ್ಗಕ್ಕೆ ಸೇರಿದವರಾಗಿರಬೇಕು. ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ದಿನಾಂಕಕ್ಕೆ ಕಾನೂನು ಪದವಿಯನ್ನು ಪಡೆದು 02 ವರ್ಷ ಮೀರಿರಬಾರದು. ಬಾರ್ ಕೌನ್ಸಿಲಿಂಗ್ನ ಖಾಯಂ ಸದಸ್ಯತ್ವ ಪ್ರಮಾಣ ಪತ್ರ ಸಲ್ಲಿಸಬೇಕು ಹಾಗೂ ತರಬೇತಿಯನ್ನು ಜಿಲ್ಲೆಯಲ್ಲಿಯೇ ಪಡೆಯಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದಂದು ಅಭ್ಯರ್ಥಿಯ ವಯಸ್ಸು 40 ವರ್ಷ ಮೀರಿರಬಾರದು. ಆಯ್ಕೆ ಮಾಡಲಾದ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಸರ್ಕಾರದ ಆದೇಶದಂತೆ ಶಿಷ್ಯ ವೇತನವನ್ನು ನೀಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳು ಜಿಲ್ಲಾ ಪಬ್ಲಿಕ್ ಪ್ರಾಸಿಕ್ಯೂಟರ್, ಸರ್ಕಾರಿ ವಕೀಲರು ಅಥವಾ 20 ವರ್ಷಗಳ ಕಾಲ ಕಡಿಮೆ ಇಲ್ಲದ ವಕೀಲ ವೃತ್ತಿಯಲ್ಲಿ ಸೇವೆ ಸಲ್ಲಿಸಿರುವ ನ್ಯಾಯವಾದಿಗಳ ಬಳಿ ತರಬೇತಿ ಪಡೆಯುತ್ತೀರಿ ಎಂಬ ಬಗ್ಗೆ ಲಿಖಿತ ರೂಪದಲ್ಲಿ ತಿಳಿಸಿರಬೇಕು.
ತರಬೇತಿಯ ಅವಧಿ 02 ವರ್ಷವಿದ್ದು, ಆಯ್ಕೆಯಾದ ಅಭ್ಯರ್ಥಿಗಳು ಮಧ್ಯದಲ್ಲಿ ಬಿಡುವುದಿಲ್ಲ ಎಂದು, ಒಂದು ವೇಳೆ ಬಿಟ್ಟರೆ ತರಬೇತಿ ಅವಧಿಯಲ್ಲಿ ಪಡೆದಿರುವ ಶಿಷ್ಯ ವೇತನವನ್ನು ಶೇ.10ರಷ್ಟು ರೂಗಳ ಬಡ್ಡಿಯೊಂದಿಗೆ ಸರ್ಕಾರಕ್ಕೆ ಹಿಂತಿರುಗಿಸಿ ಮರುಪಾವತಿ ಮಾಡುವುದಾಗಿ ಮುಚ್ಚಳಿಕೆ ಬರೆದು ಕೊಡಬೇಕು. ಈ ನಿಯಮ ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ನೌಕರಿ ಪಡೆದರೆ ಅನ್ವಯಿಸುವುದಿಲ್ಲ. ಆಯ್ಕೆಯಾದ ಅಭ್ಯರ್ಥಿಗಳು ಸುಳ್ಳು ಮಾಹಿತಿ ಹಾಗೂ ಸುಳ್ಳು ದಾಖಲೆಗಳನ್ನು ನೀಡಿ ಆಯ್ಕೆಯಾಗಿ ಶಿಷ್ಯ ವೇತನ ಪಡೆದರೆ ಅಂತಹ ಅಭ್ಯರ್ಥಿಗಳು ತರಬೇತಿ ಅವಧಿಯಲ್ಲಿ ಪಡೆದ ಶಿಷ್ಯ ವೇತನವನ್ನು ಒಟ್ಟಿಗೆ ಶೇ.10ರ ಬಡ್ಡಿಯಲ್ಲಿ ಸರ್ಕಾರಕ್ಕೆ ಹಿಂತಿರುಗಿಸಿ ಕಟ್ಟಬೇಕು.ತಪ್ಪಿದರೆ ಭೂ ಕಂದಾಯ ಬಾಕಿ ವಸೂಲಿಯಂತೆ ವಸೂಲಿ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ನಿಗಧಿತ ದಿನಾಂಕದೊಳಗೆ ಹಾಜರಾಗದಿದ್ದರೆ ಅಂತಹವರ ಆಯ್ಕೆಯನ್ನು ರದ್ದು ಪಡಿಸಲಾಗುವುದು. ಪರಿಶಿಷ್ಠ ವರ್ಗದ ಕಾನೂನು ಪದವಿಧರರ ವಾರ್ಷಿಕ ವರಮಾನದ ಮೊತ್ತ 2,50,000/- ಒಳಗಡೆ ಇರಬೇಕು. ಅರ್ಜಿಯೊಂದಿಗೆ ಸಲ್ಲಿಸುವ ಎಲ್ಲಾ ದಾಖಲಾತಿಗಳನ್ನು ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿರಬೇಕು, ತಪ್ಪಿದ್ದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದು ಜಿಲ್ಲಾ ಪರಿಶಿಷ್ಠ ವರ್ಗಗಳ ಕಲ್ಯಾಣಾಧಿಕಾರಿ ಹೆಚ್. ದಿವಾಕರ್ ತಿಳಿಸಿದ್ದಾರೆ.
