ಕರುನಾಡಿನ ಜಲಋಷಿ – ರಾಜಸ್ಥಾನದ ಜಲರಕ್ಷಕ: ದೆಹಲಿಯಲ್ಲಿ ಜಲ ಸಂರಕ್ಷಣೆಯ ಮಹಾ ಸಂವಾದ
ನವದೆಹಲಿ: ರಾಜಸ್ಥಾನದ ಪ್ರಸಿದ್ಧ ಜಲತಜ್ಞ ಹಾಗೂ ಮ್ಯಾಗ್ಸೆಸೆ ಪುರಸ್ಕೃತ ಡಾ. ರಾಜೇಂದ್ರ ಸಿಂಗ್ ಅವರು ಕರ್ನಾಟಕದ ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳನ್ನು ದೆಹಲಿಯಲ್ಲಿ ಭೇಟಿಯಾಗಿ ಜಲ ಸಂರಕ್ಷಣೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆ ಕುರಿತು ಮಹತ್ವದ ಚರ್ಚೆ ನಡೆಸಿದರು.
ಮಧ್ಯ ಕರ್ನಾಟಕದ ಬರಪೀಡಿತ ಪ್ರದೇಶಗಳಿಗೆ ನೀರು ಒದಗಿಸುವ ₹21 ಸಾವಿರ ಕೋಟಿ ವೆಚ್ಚದ ಭದ್ರಾ ಮೇಲ್ದಂಡೆ ಯೋಜನೆ ಅನುದಾನದ ಕೊರತೆಯಿಂದ ಸ್ಥಗಿತಗೊಂಡಿರುವ ಹಿನ್ನೆಲೆ, ಯೋಜನೆ ಪೂರ್ಣಗೊಳಿಸಲು ಸಂಕಲ್ಪಗೊಂಡು ಜಗದ್ಗುರುಗಳು ದೆಹಲಿಯಲ್ಲಿ ಪ್ರಮುಖ ರಾಜಕೀಯ ನಾಯಕರೊಂದಿಗೆ ಚರ್ಚೆ ನಡೆಸುತ್ತಿರುವ ವೇಳೆ ಈ ಭೇಟಿ ನಡೆದಿದೆ.
ಈ ವೇಳೆ ಮಾತನಾಡಿದ ಡಾ. ರಾಜೇಂದ್ರ ಸಿಂಗ್, ಜಲ ಸಮಸ್ಯೆ ಜಾಗತಿಕ ಮಟ್ಟದಲ್ಲಿ ಗಂಭೀರವಾಗುತ್ತಿದ್ದು, ಸ್ಥಳೀಯ ಮಟ್ಟದಲ್ಲಿ ಜಲ ಸಾಕ್ಷರತೆ ಹಾಗೂ ನೀರಿನ ಸಂಗ್ರಹಣೆಯ ಕ್ರಮಗಳು ಅವಶ್ಯಕ ಎಂದು ತಿಳಿಸಿದರು.
ಮಳೆನೀರು ಸಂಗ್ರಹ, ಚೆಕ್ಡ್ಯಾಂ ನಿರ್ಮಾಣ ಹಾಗೂ ಅಂತರ್ಜಲ ಹೆಚ್ಚಿಸುವ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಜಗದ್ಗುರುಗಳು ಮಾತನಾಡಿ, ಪ್ರಕೃತಿಯ ಪಂಚಭೂತಗಳೊಂದಿಗೆ ಮಾನವ ಸಂಬಂಧ ಕಡಿಮೆಯಾಗುತ್ತಿರುವುದು ಜಲ ಸಂಕಷ್ಟಕ್ಕೆ ಕಾರಣವಾಗುತ್ತಿದೆ. ರೈತರು ಮಳೆಗೆ ಅನುಗುಣವಾಗಿ ಬೆಳೆ ಪದ್ಧತಿಯನ್ನು ರೂಪಿಸಬೇಕು ಹಾಗೂ ಕಡಿಮೆ ನೀರಿನಲ್ಲಿ ಹೆಚ್ಚು ಉತ್ಪಾದನೆ ನೀಡುವ ಬೆಳೆಗಳನ್ನು ಬೆಳೆಯಬೇಕು ಎಂದು ಸಲಹೆ ನೀಡಿದರು.
ರಾಜಸ್ಥಾನಕ್ಕಿಂತ ಹೆಚ್ಚು ಮಳೆಯಾಗುವ ಕರ್ನಾಟಕದಲ್ಲೇ ನೀರಿನ ಸಮಸ್ಯೆ ಉಂಟಾಗುತ್ತಿರುವುದು ಜಲ ನಿರ್ವಹಣೆಯ ಕೊರತೆಯ ಸೂಚಕ ಎಂದು ಅಭಿಪ್ರಾಯಪಟ್ಟ ಡಾ. ಸಿಂಗ್, ಮಳೆಗಾಲದ ಮುನ್ನವೇ ನೀರು ಸಂಗ್ರಹಿಸುವ ಅಭಿಯಾನ ಕೈಗೊಳ್ಳಬೇಕು ಎಂದು ಕರೆ ನೀಡಿದರು.
ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ತಾಂತ್ರಿಕ ಸಲಹಾ ಸಮಿತಿ (TAC) ಅನುಮೋದನೆ ದೊರೆತಿದ್ದು, ಮುಂದಿನ ಹಂತಗಳಲ್ಲಿ ಕೇಂದ್ರ ಸರ್ಕಾರದ ಅನುಮತಿ ಸಿಕ್ಕಲ್ಲಿ ಯೋಜನೆಗೆ ಹೆಚ್ಚಿನ ಅನುದಾನ ಲಭ್ಯವಾಗುವ ನಿರೀಕ್ಷೆಯಿದೆ. ಯೋಜನೆ ಪೂರ್ಣಗೊಂಡರೆ ಸುಮಾರು 2.25 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ದೊರೆಯಲಿದ್ದು, ಲಕ್ಷಾಂತರ ರೈತರಿಗೆ ಪ್ರಯೋಜನವಾಗಲಿದೆ ಎಂದು ಜಗದ್ಗುರುಗಳು ತಿಳಿಸಿದರು.
