ಇಂದಿರಾ ಶಾಪಿಂಗ್ ಕಾಂಪ್ಲೆಕ್ಸ್ ತೆರವು ಸುಗಮ: ಪೂಜೆ ಬಳಿಕ ಕಾರ್ಯಾಚರಣೆ ಆರಂಭ
ಚಳ್ಳಕೆರೆ | ಮಾ.31
ನಗರದ ನೆಹರೂ ವೃತ್ತದಲ್ಲಿದ್ದ ಇಂದಿರಾ ಶಾಪಿಂಗ್ ಕಾಂಪ್ಲೆಕ್ಸ್ ತೆರವು ಕಾರ್ಯಾಚರಣೆ ಮಂಗಳವಾರ ಬೆಳಗ್ಗೆಯಿಂದ ಸುಗಮವಾಗಿ ಆರಂಭವಾಯಿತು. ಪೌರಾಯುಕ್ತೆ ಡಾ. ನಾಗವೇಣಿ ಹಾಗೂ ಡಿವೈಎಸ್ಪಿ ಎಂ.ಜಿ. ಸತ್ಯನಾರಾಯಣರಾವ್ ನೇತೃತ್ವದಲ್ಲಿ ಮಳಿಗೆಗಳ ತೆರವು ಕಾರ್ಯಾಚರಣೆ ನಡೆಯಿತು.
ಕಾರ್ಯಾಚರಣೆ ಆರಂಭಕ್ಕೂ ಮುನ್ನ ಪೌರಾಯುಕ್ತೆ ಡಾ. ನಾಗವೇಣಿ ಹಾಗೂ ಅಧಿಕಾರಿಗಳು ಗ್ರಾಮ ದೇವತೆ ಚಳ್ಳಕೆರೆಯಮ್ಮ ಮತ್ತು ಶ್ರೀ ವೀರಭದ್ರಸ್ವಾಮಿ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿ ಕಾರ್ಯ ಸುಸೂತ್ರವಾಗಿ ನಡೆಯಲು ಪ್ರಾರ್ಥಿಸಿದರು.
ಬೆಳಗ್ಗೆ ಸುಮಾರು 8 ಗಂಟೆಗೆ ಕಾಂಪ್ಲೆಕ್ಸ್ನ ಮೊದಲ ಮಳಿಗೆಯಿಂದ ತೆರವು ಕಾರ್ಯಾಚರಣೆ ಪ್ರಾರಂಭವಾಗಿದ್ದು, ಜೆಸಿಬಿ ಯಂತ್ರಗಳು ಕಾರ್ಯನಿರ್ವಹಿಸುತ್ತಿದ್ದಂತೆ ಗಟ್ಟಿಯಾದ ಗೋಡೆಗಳು ನೆಲಸಮವಾದವು. ಜೆಸಿಬಿಯ ಜೊತೆಗೆ ಇಟಾಚಿ ಯಂತ್ರವನ್ನು ಸಹ ಬಳಸಲಾಗಿದ್ದು ಕಾರ್ಯ ವೇಗವಾಗಿ ಮುಂದುವರಿಯಿತು.
ಬೆಳಗ್ಗಿನಿಂದ ಸಂಜೆವರೆಗೂ ಕಾರ್ಯಾಚರಣೆ ನಡೆದಿದ್ದು, ಬೆಂಗಳೂರು ರಸ್ತೆಯ ವ್ಯಾಪಾರಿಗಳು ಮತ್ತು ಪಾದಚಾರಿಗಳು ಧೂಳಿನಿಂದ ತೊಂದರೆ ಅನುಭವಿಸಿದರು. ಕೆಲ ವ್ಯಾಪಾರಿಗಳು ತಮ್ಮ ವಹಿವಾಟನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರೆ, ಕೆಲವು ಮಳಿಗೆದಾರರು ಮಧ್ಯಾಹ್ನದವರೆಗೂ ತಮ್ಮ ಸಾಮಗ್ರಿಗಳನ್ನು ಸ್ಥಳಾಂತರಿಸಿದರು.
ತ್ಯಾಜ್ಯ ಮಣ್ಣು ಹೊಂಡಕ್ಕೆ ತುಂಬಿಸಲು ಒತ್ತಾಯ
ನಗರಸಭೆಯ ವಾರ್ಡ್ ನಂ.2ರ ಕಾಟಪ್ಪನಹಟ್ಟಿ ಗೊಲ್ಲರಹಟ್ಟಿ ಪ್ರದೇಶದಲ್ಲಿ ದೊಡ್ಡ ಹೊಂಡವಿದ್ದು, ವರ್ಷಪೂರ್ತಿ ನೀರು ತುಂಬಿರುವುದರಿಂದ ಮಕ್ಕಳಿಗೆ ಹಾಗೂ ವಾಹನ ಸಂಚಾರಕ್ಕೆ ಅಪಾಯ ಉಂಟಾಗಿದೆ. ಅಲ್ಲದೆ ಸೊಳ್ಳೆಗಳ ಕಾಟ ಮತ್ತು ರೋಗಭೀತಿ ಹೆಚ್ಚಾಗಿದೆ.
ಈ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆಯಲ್ಲಿ ಸಿಗುವ ತ್ಯಾಜ್ಯ ಮಣ್ಣನ್ನು ಆ ಹೊಂಡಕ್ಕೆ ತುಂಬುವಂತೆ ಸ್ಥಳೀಯ ಸಾರ್ವಜನಿಕರು ನಗರಸಭೆಯನ್ನು ಒತ್ತಾಯಿಸಿದ್ದಾರೆ.
