ಅಧ್ಯಾತ್ಮ ರಶ್ಮಿ – 2 ಶ್ವೇತವಸ್ತ್ರದ ಸಂತ ಬೆಳಗೆರೆಯ ಕೃಷ್ಣಶಾಸ್ತ್ರಿಗಳು

ಅದು ನಾನು ಹತ್ತನೇ ತರಗತಿಯನ್ನು ಮುಗಿಸಿ, ಪಿಯುಸಿಯ ಮೆಟ್ಟಿಲೇರುವ ಸಮಯ. ಕೇವಲ ಹಳ್ಳಿಯ ಶಾಲೆಗಳಲ್ಲೇ ಓದಿ ಬರೆದ ನಾನು ಸ್ವಲ್ಪ ದಡ್ಡನಾದ್ದರಿಂದ ಅಂದರೆ town ನಲ್ಲಿ ಓದಿದ್ದರೆ ಬುದ್ಧಿವಂತನಾಗಿರುತ್ತಿದ್ದೆ ಎಂದಲ್ಲ. ಪಿಯುಸಿ ಯಲ್ಲಿ ಎಲ್ಲರಂತೆ science ಓದಬೇಕು ಎಂಬ ಇಚ್ಛೆಯಿಂದ ಶಿರಾ ನಗರದ ಕಾಲೇಜೊಂದರಲ್ಲಿ science ಮುಗಿಸಿದೆ. ಆದರೆ ಅದು ಅಪೂರ್ಣವೆನಿಸಿತು. ಆಗ commerce ವಿಭಾಗಕ್ಕಿದ್ದ demand ನನ್ನನ್ನು ಆಕರ್ಷಿಸಿತು. ಆ ಸಂದರ್ಭದಲ್ಲಿ ನನ್ನ ಮನಸ್ಸು ಕೂಡ ವ್ಯಗ್ರವಾಗಿತ್ತು. ಅದಕ್ಕೆ ಕಾರಣವೇನೋ ಗೊತ್ತಿಲ್ಲ. ಅಪ್ಪ ತುಂಬಾ ಭಾವುಕರು ಅದರಲ್ಲೂ ನನ್ನ ವಿಷಯದಲ್ಲಿ ಅವರಿಗೆ ತುಂಬಾ ಕಾಳಜಿ. ಸರಿ, ಮಗ ಕಣ್ಮುಂದೆ ಓದಲಿ ಅಂತ ಬೆಳಗೆರೆ ಕಾಲೇಜಿಗೆ ಮತ್ತೆ ಕಾಮರ್ಸ್ ಓದಲು admission ಮಾಡಿಸಿದರು. ಎರಡು ವಿಭಾಗಗಳಲ್ಲಿ ಪಿಯುಸಿ ಮಾಡಿದವನು ನಾನೇ ಏನೋ ತಿಳಿಯದು. ಬೆಳಗೆರೆ ಎಂದರೆ ಕೃಷ್ಣಶಾಸ್ತ್ರಿಗಳ ಬಗ್ಗೆ ಕೇಳಿದ್ದೆ. ಆ ವ್ಯಕ್ತಿ ಹೇಗಿರಬಹುದು..? ಅಪ್ಪ ಯಾವಾಗ್ಲೂ ಹೇಳ್ತಿರ್ತಾರೆ ” ಶಾಸ್ತ್ರಿ ಮೇಷ್ಟ್ರು ಸಿಕ್ಕಿದ್ರು. ಅವರ ಜೊತೆ ಮಾತಾಡಿ ಬಂದೆ ಸ್ವಲ್ಪ late ಆಯ್ತು” ಅಂತ ರಾತ್ರಿಯ ಕೊನೆಯ ಬಸ್ಸಿಗೆ ಬಂದ ಅದೆಷ್ಟೋ ಘಟನೆಗಳು ನೆನಪಿದೆ. ಮನಸ್ಸಿನಲ್ಲಿ ಹಲವಾರು ಬಾರಿ ಅನಿಸುತ್ತಿತ್ತು, ಯಾರು ಈ ಶಾಸ್ತ್ರಿ ಮೇಷ್ಟ್ರು…? ಕೊನೆಗೂ ಅವರನ್ನು ಭೆಟ್ಟಿಯಾಗುವ ದಿನ ಬಂದಿತು.
ಕಾಲೇಜಿಗೆ ಹೋಗುವ ದಿನ ಅಪ್ಪನೂ ನನ್ನ ಜೊತೆಗೆ ಬಂದಿದ್ದರು. ನಮ್ಮೂರಿನ RTS(Manjunatha) ಬಸ್ಸಿಗೆ ಹೋಗಿ ಅಲ್ಲಿ ನಾಗಭೂಷಣರಾಯರು ನಮ್ಮಿಬ್ಬರನ್ನೂ ಕಾಲೇಜಿನ ಬಳಿಗೆ ಕರೆದುಕೊಂಡು ಹೋದರು. ಬಹುಶಃ ನಾನು ನಾರಾಯಣಪುರ ಬೆಳಗೆರೆಯನ್ನು ನೋಡಿದ್ದು ಆಗಲೇ. ಅಲ್ಲಿಯ ತನಕ ಬರೀ ಹೆಸರು ಕೇಳಿ ಖುಷಿಪಟ್ಟಿದ್ದಾಗಿತ್ತು. ಸರಿ ನಾಗಭೂಷಣರಾಯರು ಸೀದಾ ಶಾಸ್ತ್ರಿ ಮೇಷ್ಟ್ರ ಮನೆಗೆ ಕರೆದುಕೊಂಡು ಹೋದರು.
ಒಳಗೆ ಹೋದೆವು ನಾಗಭೂಷಣರಾಯರು ಮೊದಲು ಒಳಗೆ ಹೋದರು ” ಸಾರ್ ! ಕಣಜನಹಳ್ಳಿಯಿಂದ ನಾಗರಾಜ್ ಬಂದಿದಾರೆ.” ಎಂದರು. ಒಳಗಿದ್ದ ವ್ಯಕ್ತಿ ಹೊರಗೆ ಬಂದರು. ಒಂದು ಬಗಲುಗಸೆ ಬನಿಯನ್ನು, ಹೊಲಿಸಿದ ಒಂದು ನಿಕ್ಕರ್ ನಲ್ಲಿದ್ದ ಆ ವ್ಯಕ್ತಿಯನ್ನು ಕಂಡು ಅಪ್ಪ ಅವರ ಕಾಲಿಗೆ ನಮಸ್ಕಾರ ಮಾಡಿದರು, ನಾನೂ ನಮಸ್ಕಾರ ಮಾಡಿದೆ. ಆ ವ್ಯಕ್ತಿ ಹೇಳಿದರು ” ಹೇ ! ಇದೇ ನಂಗೆ ಆಗಲ್ಲ ನೋಡಿ. ನೀವು ನಂಗೆ ನಮಸ್ಕಾರ ಮಾಡ್ಬಾರ್ದು ನಾಗರಾಜ್ ” ಎಂದರು. ಅದಕ್ಕೆ ಅಪ್ಪ ” ನಾನೆಲ್ಲಿ ನಿಮಗೆ ನಮಸ್ಕಾರ ಮಾಡಿದೆ ನನಗೆ ನಾನೇ ನಮಸ್ಕಾರ ಮಾಡ್ಕೊಂಡೆ ಸರ್” ಅಂದರು. ಆ ವ್ಯಕ್ತಿ ನಾಗಭೂಷಣರಾಯರ ಕಡೆಗೆ ನೋಡಿ ” ನೋಡ್ರೀ ನಾಗಣ್ಣ ಇದಕ್ಕೇನ್ ಹೇಳಲಪ್ಪ.” ಅಂತ ನಕ್ಕರು. ಒಳಗೆ ಹೋದೆವು. ಅಪ್ಪ ಆಗ ಹೇಳುತ್ತಾರೆ ಇವರೇ ಕಣೋ ಕೃಷ್ಣಶಾಸ್ತ್ರಿಗಳು ಅಂತ. ನನಗೆ ಖುಷಿ ಆಶ್ಚರ್ಯ ಒಟ್ಟಿಗೆ ಆದವು. ಮತ್ತೆ ನಮಸ್ಕಾರ ಮಾಡಿದೆ. ಶಾಸ್ತ್ರಿಗಳು ನಕ್ಕು ನನ್ನ ತಲೆ ಸವರಿದರು. ಇಬ್ಬರ ಉಭಯ ಕುಶಲೋಪರಿಗಳು ನಡೆದವು. ಅಪ್ಪ ಹೇಳಿದರು ” ಸಾರ್ ! ಇವನೇ ನನ್ನ ಮಗ ನಿಮ್ಮ ಕಾಲೇಜಿಗೆ ಹಾಕಿದೀನಿ. ಇನ್ನು ನೀವು ಉಂಟು ಇವನು ಉಂಟು ” ಶಾಸ್ತ್ರಿಗಳು ಹೇಳಿದರು ” ನೋಡಪ್ಪಾ ! ಅಪ್ಪ ಹೇಳಿದ್ದು ಕೇಳಿದ್ಯಾ..? ಇನ್ನು ನಾನು ನೀನು ಇಬ್ಬರೇ, ಸರಿಯಾಗಿ ಮಾತು ಕೇಳದಿದ್ದರೆ ಬೀಳ್ತಾವೆ” ಅಂತ ನಕ್ಕರು. ನಾನೂ ನಕ್ಕುಬಿಟ್ಟೆ. ಹೊರಗೆ ಬಂದು ಎಷ್ಟು ಹೊತ್ತಾದರೂ ಆ ಆಕರ್ಷಣೆ ನನ್ನನ್ನು ಬಿಡಲಿಲ್ಲ. ಅವರನ್ನು ಸರ್ ಎನ್ನಲೂ ಮನಸಾಗಲಿಲ್ಲ.
ಶಾಸ್ತ್ರೀಜಿಯವರು ಗಾಂಧೀವಾದಿಗಳಾದ್ದರಿಂದ ಗಾಂಧೀಜಿಯವರ ತತ್ತ್ವಗಳನ್ನು ಪಾಲಿಸುತ್ತಿದ್ದರು. ಸದಾ ಶ್ವೇತ ವಸ್ತ್ರಧಾರಣೆ ಮಾಡುತ್ತಿದ್ದ ಅವರು ನಾನು ನೋಡುತ್ತಿರುವಾಗ 92 ವರ್ಷ ವಯಸ್ಸಿನವರು. ಆ ವಯಸ್ಸಿನಲ್ಲಿಯೂ ಪ್ರತಿದಿನವೂ ಎರಡು ಬಾರಿ ಅವರು ಶಾಲೆ ಮತ್ತು ಕಾಲೇಜಿಗೆ ಭೇಟಿ ನೀಡಿ ಸ್ವತಃ ತರಗತಿಗಳನ್ನು ವೀಕ್ಷಿಸುತ್ತಿದ್ದರು. ಹಾಗೇ ಒಮ್ಮೆ ನಾನು ಹೊರಗೆ ನಿಂತಾಗ (ತರಗತಿಯ ಅವಧಿಯಲ್ಲಿ) ನನ್ನನ್ನು ಕರೆದು ಕೇಳಿದರು ಏಕೆ ಇಲ್ಲಿದ್ದೀಯ ? ನಾಣು ಹೇಳಿದೆ “ ಕ್ಲಾಸ್ ನಡೀತಿಲ್ಲ ತಾತಾ “. ಸರಿ ಅಂದು ಹೋದರು. ನಂತರ ನಾನು ಹೇಳಿದ ಸುಳ್ಳು ಎಷ್ಟು ಬಾಧಿಸತೊಡಗಿತೆಂದರೆ ತಡೆಯಲಾರದೇ ಮನೆಗೆ ಹೋಗಿ ತಾತನ ಕೋಣೆಯಲ್ಲಿ ಕುಳಿತೆ ಆಗಲೂ ಅವರು ನನ್ನ ನೋಡಿ ಮುಗುಳ್ನಕ್ಕರು ಆ ನಗುವಿನಲ್ಲಿ ನಾನು ಹೇಳಿದ್ದು ಸುಳ್ಳು ಎಂಬ ಕನ್ನಡಿಯಿತ್ತು. “ತಪ್ಪಾಯ್ತು ತಾತ ನಾನು ಸುಳ್ಳು ಹೇಳಿದೆ. ಕ್ಲಾಸ್ಗೆ ಹೋಗೋಕೆ ಮನಸಿರಲಿಲ್ಲ ಹಾಗಾಗಿ” ಎನ್ನುವಾಗ ತಪ್ಪಿತಸ್ಥ ಭಾವ ದುಃಖವಾಗಿ ಉಮ್ಮಳಿಸಿತು. ಆಗ ನನ್ನ ಹೆಗಲ ಮೇಲೆ ಕೈಹಾಕಿ ಹೇಳಿದರು “ ಉಪ್ಪನೇ ಸವಿದವನು ಸಕ್ಕರೆಯನೇನ್ ಬಲ್ಲ ಬೆಪ್ಪನವ ಸಕ್ಕರೆಯ ಉಪ್ಪೆಂಬನು “ ಅಂದರೆ “ಯಾವಾಗಲೂ ಸುಳ್ಳು ಅನ್ನೋ ಉಪ್ಪು ತಿನ್ನೋನಿಗೆ ಸಕ್ಕರೆಯ ರುಚಿ ಹೇಗೆ ಗೊತ್ತಾಗಬೇಕು. ಸಕ್ಕರೆ ಅಂದ್ರೆ ಆ ತಪ್ಪನ್ನ ತಿದ್ಕೊಳೋದು. ಸುಳ್ಳು ತಪ್ಪು ಮಾಡೋದು ಧೈರ್ಯಶಾಲಿ ಲಕ್ಷನವಲ್ಲ ಕಣೋ ಅದನ್ನ ಒಪ್ಕೊಂಡು ಮತ್ತೆ ಆ ತಪ್ಪು ಮಾಡೋದಿಲ್ಲ ಅಂತ ನಿರ್ಧಾರ ಮಾಡಿ ಅದನ್ನ ಬಿಟ್ಟು ಬಿಡ್ತೀವಿ ನೋಡು ಅದು ಧೈರ್ಯಶಾಲಿಯ ಲಕ್ಷಣ” ಆ ಕ್ಷಣದಿಂದ ನಾನು ಈ ಕ್ಷಣದವರೆಗೆ ಸುಳ್ಳು ಹೇಳುವ ಸಾಹಸ ಮಾಡಿಲ್ಲ. ʼಸತ್ಯಮಪ್ರಿಯಂ ಭೂಯಾತ್ ʼ ಎನ್ನುವಂತೆ ಅಪ್ರಿಯವಾದ ಸತ್ಯವನ್ನು ಹೇಳುವಾಗ ಒಮ್ಮೆ ಯೋಚಿಸುತ್ತೇನೆ.
ದಿನ ಕಳೆದವು. ದಿನೇ ದಿನೇ ಶಾಸ್ತ್ರಿ ಮೇಷ್ಟ್ರ ಸಹವಾಸ ಮತ್ತೆ ಮತ್ತೆ ಬೇಕೆನಿಸತೊಡಗಿತು. ವಾರದಲ್ಲೊಮ್ಮೆ ಏನಾದರೂ ನೆಪ ಮಾಡಿ ಅರ್ಧಗಂಟೆ ಅವರೊಂದಿಗೆ ಮಾತಾಡಲು ನಿರ್ಧಾರ ಮಾಡಿದೆ. ಸಂದರ್ಭ ತಾನಾಗಿಯೇ ಬಂತು. ನನಗೆ ಮೊದಲಿನಿಂದಲೂ ಹಾಡುವ ಹುಚ್ಚು ಮನ ಬಂದಂತೆ ಹಾಡುವ ನಾನು ಸನ್ಮಾನ – ಅವಮಾನ ಎರಡನ್ನೂ ಈ ನನ್ನ ಸಂಗೀತ ಸಾಧನೆಯಲ್ಲಿ ಅನುಭವಿಸಿದೆ. ಇರಲಿ. ಒಮ್ಮೆ ಯಾವುದೋ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಪ್ರಾರಂಭವಾಗುವವರೆಗೂ ಸಮಯವಿದ್ದುದರಿಂದ “ಯಾರಾದ್ರೂ ಹಾಡು ಹೇಳ್ತೀರೇನೋ ?” ಅಂತ ನಮ್ಮ ಪ್ರಿನ್ಸಿಪಾಲ್ ಕೇಳಿದರು. ನಮ್ಮಕ್ಕನ ಮಗ ಶ್ರೀನಾಥ ನಾನೂ ಒಂದೇ ವಯಸ್ಸಿನವರು ಇಬ್ಬರೂ ಜೊತೆಗೇ ಪಿಯುಸಿ ಮುಗಿಸಿದವರು. ಅವನು ” ಲೇ ! ಹೋಗಲೇ ನೀನು ಹಾಡು ಹೇಳು ” ಅಂದ. ಹೋದೆ ” ಆಡಿಸಿ ನೋಡು ಬೀಳಿಸಿನೋಡು ” ಹಾಡಿದೆ. ಎಲ್ಲರ ಮೆಚ್ಚುಗೆ ಪಡೆದೆ. ಅದಾದ ನಂತರ ಇನ್ನೊಂದು ಕಾರ್ಯಕ್ರಮದಲ್ಲಿ ಅರವಿಂದ್ ಸರ್, ವಿನಯ್ ಸರ್, ಪ್ರಿನ್ಸಿಪಾಲ್ ಮತ್ತು ಗಿರೀಶ್ ಸರ್ ನನ್ನ ಕರೆದು ” ಸಂಸ್ಥೆಯ ಪ್ರಾರ್ಥನಾ ಗೀತೆಯನ್ನು ಕೈಗಿಟ್ಟು ” ಇವತ್ತು ನೀನೇ ಹಾಡೋ. ” ಅಂದರು. ಗಾಬರಿಯಾಯ್ತು ಏಕೆಂದರೆ ನಾನೇನು ಕುಮಾರ ಗಂಧರ್ವರ ಗ್ವಾಲಿಯರ್ ಘರಾನದಲ್ಲಿನ ಗಾಯಕನಲ್ಲ. ಆದರೂ ಖುಷಿಯಿಂದ ಆಯ್ತು ಎಂದೆ. ಕಾರ್ಯಕ್ರಮ ಪ್ರಾರಂಭ ಪ್ರಾರ್ಥನೆಯೊಂದಿಗೆ ಅಂತ ನನ್ನ ಹೆಸರು ಹೇಳಿಯೇಬಿಟ್ಟರು. ಶಾಸ್ತ್ರಿಗಳು ನನ್ನನ್ನೇ ಗಮನಿಸಿದ್ದು ನಾನು ನೋಡಲಿಲ್ಲ ಹಾಡಿದೆ ಹೊರಗೆ ಬಂದೆ. ಕಾರ್ಯಕ್ರಮವೆಲ್ಲ ಮುಗಿದ ನಂತರ. ಪ್ರಾಂಶುಪಾಲರಿಂದ ಬುಲಾವ್ ಬಂತು ಹೋದೆ.ಅಲ್ಲಿ ಶಾಸ್ತ್ರಿಗಳು, ಪ್ರಿನ್ಸಿಪಾಲರು, ಮತ್ತು ಎಲ್ಲ ಉಪನ್ಯಾಸಕರೂ ಇದಾರೆ ನನ್ನ ಜಂಘಾಬಲ ಅಡಗಿಹೋಯ್ತು. ಏಕೆಂದರೆ ಅದರ ಹಿಂದಿನ ದಿನ ಮೊಬೈಲ್ ಕಾಲೇಜಿಗೆ ಒಯ್ದು ನಮ್ಮ ಧನಂಜಯ( ಆರ್.ಡಿ) ಸರ್ ಅದನ್ನು ನೋಡಿ, ಸುಮ್ಮನಾಗಿದ್ದರು. ಅದರ ವಿಷಯವೇನೋ ಒಂದುವೇಳೆ ಅದೇ ಆಗಿದ್ದರೆ ?! ಮುಗೀತು ಇನ್ನು ನನ್ನ ಕಥೆ ಅನ್ನಿಸಿತು. ಆದರೆ ಅಲ್ಲಿ ಕುಳಿತ ಶಾಸ್ತ್ರಿಗಳು ” ಬಾ ಇಲ್ಲಿ ” ಅಂದರು. ಹೋದೆ ನಗುತ್ತಾ ಹೇಳಿದರು ” ತುಂಬಾ ಚೆನ್ನಾಗಿ ಹಾಡ್ತೀಯ.ಇನ್ಮುಂದೆ prayer ನೀನೇ ಹಾಡು” ಅಂದರು. ಸರಿ ಎಂಬಂತೆ ತಲೆಯಲ್ಲಾಡಿಸಿದೆ. ಹೊರಬಂದೆ ಮುಂದೆ ನನಗೆ ಅವರನ್ನು ಸರ್ ಎನ್ನಲು ಮನಸಾಗಲಿಲ್ಲ. ತಾತಾ ಎಂದೇ ಕರೆಯುತ್ತಿದ್ದೆ. ಅವರ ಒಡನಾಟ ಹೆಚ್ಚಾಯಿತು, ಅವರು ನನಗೆ ತಿಳಿಸಿದ ಅದೆಷ್ಟೋ ವಿಷಯಗಳು ನನ್ನ ಮಸ್ತಕ ಗ್ರಂಥಾಲಯಕ್ಕೆ ಕೊಡುಗೆ ನೀಡಿದ ಪುಸ್ತಕಗಳಂತೆ ಆದವು. ಅವರೊಮ್ಮೆ ಹೇಳಿದರು ” ನೋಡು ಪ್ರಸಾದು, ನೀನು ಜಗತ್ತನ್ನ ಸರಿ ಮಾಡ್ತೀನಿ ಅಂತ ಹೋಗ್ಬೇಡ. ಯಾಕಂದ್ರೆ ನೀನು ಅದು ಮಾಡು ಇದು ಮಾಡು ಅಂದ್ರೆ ಯಾರೂ ಕೇಳಲ್ಲ. ನೀನು ಕೆಲಸ ಮಾಡು ideal ಆಗು ಅಂದರೆ ಜಗತ್ತು ನಿನ್ನ ಅನುಸರಿಸೋಕೆ ಶುರು ಮಾಡುತ್ತೆ” ಆ ದಿನ ಏನೂ ಅರ್ಥವಾಗಲಿಲ್ಲ. ಇಂದು ಅವರು ನನಗೆ ಹೇಳಿದ ಪ್ರತಿ ಶಬ್ದದ ಅನುಭವವಾಗುತ್ತಿದೆ. ಆ ಬೆಳಗೆರೆಯ ಸಂಸ್ಥೆಗೆ ತನ್ನ ಇಡೀ ಜೀವನವನ್ನೇ ಸವೆಸಿದ ಆ ತಾತನಿಗೆ ಏನೆನ್ನಬೇಕು..? ಸಂತನೆಂದೇ ಅನ್ನಬೇಕು. ಜಾತಿ ಮತಗಳಿಗೆ ಅವಕಾಶ ಕೊಡದೇ, ಎಲ್ಲರನ್ನೂ ಒಂದೆಡೆ ಸೇರಿಸಿ ಇಡೀ ಕರ್ನಾಟಕದ ಮೂಲೆ ಮೂಲೆಯಿಂದ ಬಡ ವಿದ್ಯಾರ್ಥಿಗಳು ಬಂದು ಹೋದರು. ಅವರೆಲ್ಲರೂ ಇಂದಿಗೂ ಸಂಸ್ಥೆಯ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಾರೆ. ಇಂದು ಸರ್ಕಾರದ ಅನುದಾನ ಸಿಕ್ಕರೆ ಸಾಕು ಎಂದು ತಿಂದು ತಿಂದು ತೇಗುತ್ತಿರುವ ಎಷ್ಟೋ ವಿದ್ಯಾಸಂಸ್ಥೆಗಳ ಮಧ್ಯೆ ಸರ್ಕಾರದ ಒಂದು ರೂಪಾಯಿ ಅನುದಾನವಿಲ್ಲದೇ ಇಡೀ ಸಂಸ್ಥೆಯನ್ನು ನಡೆಸಿದ ಇವರು ಅತ್ಯಂತ ಸರಳರು. ನಾನೂ ಬಹಳಷ್ಟು ಬಾರಿ ಇಂದಿಗೂ ಹಲವಾರು ಕಾರ್ಯಕ್ರಮಗಳಲ್ಲಿ ಬೆಳಗೆರೆಯ ಸಂಸ್ಥೆಯಲ್ಲಿ ಪ್ರಾರ್ಥನಾ ಗೀತೆಯನ್ನು ಹಾಡುತ್ತೇನೆ. ಇಂದು ಶಾಸ್ತ್ರಿಗಳು ಇಲ್ಲ ಆದರೆ ಒಂದು ಖುಷಿಯೆಂದರೆ ನಾನು ಪ್ರಾರ್ಥನೆಯನ್ನು ಪ್ರಾರಂಭಿಸುತ್ತಿದ್ದಂತೆ ಶಾಸ್ತ್ರಿಗಳ ಭಾವಚಿತ್ರಕ್ಕೆ ಹಾಕಿದ ಹೂಮಾಲೆಯು ಪ್ರಸಾದ ರೂಪದಲ್ಲಿ ಕೆಳಗೆ ಬೀಳುತ್ತದೆ. ಇಡೀ ಸಂಸ್ಥೆಯ ಎಲ್ಲರೂ ಶಾಸ್ತ್ರಿಗಳ ಹಾಗೆಯೇ ಇಂದಿಗೂ ನನ್ನನ್ನು ಪ್ರೀತಿಯಿಂದ ಕಾಣುತ್ತಾರೆ. ಇಂಥ ಸುಮಧುರ ಕ್ಷಣಗಳನ್ನು ಮರೆಯಲಾದೀತೇ…. ನಿಮ್ಮೊಂದಿಗೆ ನೆನಪುಗಳ ಮಣಿಹಾರದ ಒಂದೆರೆಡು ಮಣಿಗಳನ್ನು ನಿಮ್ಮೆದುರು ಇಟ್ಟಿದ್ದೇನೆ. ಮತ್ತಷ್ಟು ವಿಷಯಗಳೊಂದಿಗೆ ಇನ್ನೊಮ್ಮೆ ನಿಮ್ಮನ್ನು ಬೇಸರಗೊಳಿಸುವೆ. ಕೃಪೆಯಿರಲಿ.
(🌹 ಪ್ರಸಾದ್ ಶ್ರೀವತ್ಸ 🌹)
