*ವಾಹನ ಚಾಲನೆ ವೇಳೆ ಅವಸರ ಬೇಡ, ಎಚ್ಚರಿಕೆಯಿಂದ ವಾಹನ ಚಲಾಯಿಸಿ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ*
*ಸೇಫ್ ಎ ಥಾನ್ ಗೆ ಚಾಲನೆ ನೀಡಿದ ಸಾರಿಗೆ ಸಚಿವರು*
ದೈಹಿಕ ಚಟುವಟಿಕೆಗಳಿಂದ ಉತ್ತಮ ಆರೋಗ್ಯ, ಮಾನಸಿಕ ಶಾಂತಿ, ನೆಮ್ಮದಿ ಸಿಗುತ್ತದೆ. ಮನಸ್ಸು ಶಾಂತವಾಗಿದ್ದರೆ ವಾಹನ ಚಾಲನೆ, ಪ್ರಯಾಣದ ವೇಳೆ ನಾವು ಎಚ್ಚರಿಕೆಯಿಂದ ಇರಲು ಸಾಧ್ಯ. ಅದರಿಂದ ರಸ್ತೆ ಸುರಕ್ಷತೆ ಸಾಧ್ಯವಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸಾರಿಗೆ ಇಲಾಖೆಯು ಬೆಂಗಳೂರು ಸಂಚಾರ ಪೊಲೀಸ್ ಸಹಯೋಗದೊಂದಿಗೆ ಶನಿವಾರ ಆಯೋಜಿಸಿದ್ದ “ನಮ್ಮ ರಸ್ತೆ ನಮ್ಮ ಸುರಕ್ಷತೆ” 5ಕೆ ‘ಸೇಫ್ ಎ ಥಾನ್’ ವಾಕಿಂಗ್, ರನ್ನಿಂಗ್, ಸೈಕ್ಲಿಂಗ್, ಬೈಕಿಂಗ್ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಸಚಿವರು ಮಾತನಾಡಿದರು.
ಅಪಘಾತಗಳು, ರಸ್ತೆ ಸುರಕ್ಷತೆ ಬಗ್ಗೆ ಬೇರೆಯವರನ್ನು ದೂಷಿಸುವ ಬದಲು ನಾವು ಎಚ್ಚರಿಕೆ ವಹಿಸಬೇಕು. ಬೆಂಗಳೂರಿನಂತಹ ಮಹಾ ನಗರದಲ್ಲಿ ಅವಸರ, ಗಡಿಬಿಡಿಯಿಂದಲೇ ಬಹುತೇಕ ಅಪಘಾತ ಸಂಭವಿಸುತ್ತವೆ. ಅದೇ ನಾವು ಸ್ವಲ್ಪ ಬೇಗ ಹೊರಟರೆ ಅವಸರದ ಪ್ರಶ್ನೆಯೇ ಬರುವುದಿಲ್ಲ. ಅಸರದಲ್ಲಿದ್ದಾಗ ಮನಸ್ಸಿನ ಮೇಲೆ ಒತ್ತಡ ಬೀಳುತ್ತದೆ. ಅದು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಸಾರಿಗೆ ಆಯುಕ್ತ ಯೋಗೀಶ್ ಎ.ಎಂ ಮಾತನಾಡಿ, ರಸ್ತೆ ಸುರಕ್ಷತೆಯು ಕೇವಲ ನಿಯಮ ಪಾಲನೆಯಲ್ಲ, ಅದು ಪ್ರತಿಯೊಬ್ಬ ನಾಗರಿಕನ ಅಮೂಲ್ಯ ಜೀವವನ್ನು ಉಳಿಸುವ ಒಂದು ಮಹತ್ತರ ಜವಾಬ್ದಾರಿಯಾಗಿದೆ. ರಸ್ತೆಯಲ್ಲಿ ಸಂಚರಿಸುವಾಗ ನಾವು ತೋರುವ ಎಚ್ಚರಿಕೆ ಮತ್ತು ಸಂಯಮವು ನಮ್ಮ ಕುಟುಂಬದ ಭವಿಷ್ಯದ ಜೊತೆಗೆ ಇತರರ ಪ್ರಾಣವನ್ನೂ ರಕ್ಷಿಸುತ್ತದೆ. ಆದ್ದರಿಂದ, ಪ್ರತಿಯೊಬ್ಬರೂ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ಅಪಘಾತ ರಹಿತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ರಸ್ತೆ ಸುರಕ್ಷತೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ನಮ್ಮ ಜೀವದ ಜೊತೆಗೆ ಇತರರ ಜೀವವೂ ಬಹಳ ಮುಖ್ಯ ಎಂಬುದನ್ನು ಪ್ರತಿಯೊಬ್ಬ ವಾಹನ ಸವಾರರು ಅರಿತುಕೊಳ್ಳಬೇಕು. ಅರ್ಜೆಂಟ್ ಎನ್ನುವ ಕಾರಣಕ್ಕೋ ಅಥವಾ ಶೋಕಿಗಾಗಿಯೋ ವಾಹನವನ್ನು ಅತಿಯಾದ ವೇಗದಲ್ಲಿ ಚಲಾಯಿಸುವುದರಿಂದಲೇ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಇಂತಹ ಅಪಘಾತಗಳನ್ನು ತಡೆಯಲು ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಒನ್-ವೇ ಉಲ್ಲಂಘನೆ ಮತ್ತು ವ್ಹೀಲಿಂಗ್ ಮಾಡುವವರ ವಿರುದ್ಧ ಈಗಾಗಲೇ ಕಠಿಣ ಕಾನೂನು ಕ್ರಮಗಳನ್ನು ಜರುಗಿಸಲಾಗುತ್ತಿದೆ ಎಂದು ತಿಳಿಸಿದರು.
Aಕ್ರಿಕೆಟಿಗ ಸುನೀಲ್ ಜೋಶಿ ಮಾತನಾಡಿ, ಬೈಕ್ ಓಡಿಸುವಾಗ, ಕಾರು ಚಲಾಯಿಸುವಾಗ ಜನರು ಮೊಬೈಲ್ ಬಳಸುತ್ತಿರುವುದನ್ನು ಗಮನಿಸಿದ್ದೇನೆ. ಇದು ವಾಹನ ಚಲಾಯಿಸುವವರು ಮತ್ತು ಬೇರೆಯವರ ಜೀವಕ್ಕೂ ಅಪಾಯ ಉಂಟು ಮಾಡುತ್ತದೆ. ಯಾವುದೇ ಕಾರಣಕ್ಕೂ ವಾಹನ ಚಾಲನೆ ವೇಳೆ ಮೊಬೈಲ್ ಬಳಸಬೇಡಿ. ತುರ್ತು ಅಗತ್ಯವಿದ್ದರೆ ವಾಹನವನ್ನು ಸುರಕ್ಷಿತವಾಗಿ ಪಕ್ಕಕ್ಕೆ ನಿಲ್ಲಿಸಿ ಮಾತನಾಡಿ ಎಂದು ಸಲಹೆ ನೀಡಿದರು.
13,000 ಜನ ಸೇಫ್ ಎ ಥಾನ್ ನಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಾರಿಗೆ ಇಲಾಖೆ ಕಾರ್ಯದರ್ಶಿ ಎನ್ ವಿ ಪ್ರಸಾದ್ ಆಯುಕ್ತರಾದ ಯೋಗೀಶ್ ಯುವಜನ ಮತ್ತು ಕ್ರೀಡಾ ಇಲಾಖೆ ಆಯುಕ್ತರಾದ ಚೇತನ್ , ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಕಾವೇರಿ ಆಸ್ಪತ್ರೆ ಚೇರ್ಮನ್ ವಿಜಯ ಭಾಸ್ಕರನ್ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
