ಮಕ್ಕಳಿಗೆ ಭಾಷಾ ಕೌಶಲದ ಸಾಮರ್ಥ್ಯ ಬೆಳೆಸಿ; ಎಂ. ನಾಸಿರುದ್ದೀನ್
ಚಿತ್ರದುರ್ಗ: ಮಕ್ಕಳಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಸಂವಹನಾ ಸಾಮರ್ಥ್ಯವನ್ನು ಪರಿಣಾಮಕಾರಿಯಾಗಿ ಬೆಳೆಸಬೇಕು ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.
ಡಯಟ್ನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ದ್ವಿಭಾಷಾ ತರಗತಿ ಬೋಧನೆ ಕುರಿತು ಆಯೋಜಿಸಿದ್ದ ಜಿಲ್ಲಾ ಹಂತದ ಎಂ.ಆರ್.ಪಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಕೆ.ಪಿ.ಎಸ್, ಪಿ.ಎಂ.ಶ್ರೀ ಮತ್ತು ದ್ವಿಭಾಷಾ ತರಗತಿ ಪ್ರಾರಂಭಿಸಿರುವ ಸರ್ಕಾರಿ ಶಾಲೆಗಳು, ಪೂರ್ವ ಪ್ರಾಥಮಿಕ ತರಗತಿ ಪ್ರಾರಂಭಿಸಿರುವ ಸರ್ಕಾರಿ ಶಾಲೆಗಳು, ಗಣಿಬಾಧಿತ ತಾಲೂಕುಗಳಾದ ಚಿತ್ರದುರ್ಗ, ಹೊಳಲ್ಕೆರೆ, ಮೊಳಕಾಲ್ಮೂರು, ಹೊಸದುರ್ಗದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ 1 ರಿಂದ 5 ನೇ ತರಗತಿಗೆ ಬೋಧಿಸುವ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತದೆ. ತರಬೇತಿಯಲ್ಲಿ ಕಲಿತ ಅಂಶಗಳನ್ನು ತರಗತಿಯಲ್ಲಿ ಅನುಷ್ಟಾನ ಮಾಡುವ ಮೂಲಕ ಮಕ್ಕಳಲ್ಲಿ ಭಾಷಾ ಕೌಶಲಗಳಲ್ಲಿ ಸಾಮರ್ಥ್ಯ ಬೆಳೆಸಬೇಕು ಎಂದರು.
ಉಪ ಪ್ರಾಚಾರ್ಯ ಎಸ್.ನಾಗಭೂಷಣ್ ಮಾತನಾಡಿ ಜಿಲ್ಲಾ ಹಂತದಲ್ಲಿ ತರಬೇತಿ ಪಡೆಯುತ್ತಿರುವ ಎಂ.ಆರ್.ಪಿಗಳು 5 ದಿನಗಳ ತರಬೇತಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪರಸ್ಪರ ಚರ್ಚಿಸುವುದರ ಮೂಲಕ ವಿಷಯಜ್ಞಾನ ಪಡೆದು ತಾಲೂಕು ಹಂತದಲ್ಲಿ ಶಿಕ್ಷಕರಿಗೆ ಪರಿಣಾಮಕಾರಿಯಾಗಿ ತರಬೇತಿ ನೀಡಬೇಕು ಎಂದರು.
ಹಿರಿಯ ಉಪನ್ಯಾಸಕ ಎಸ್.ಸಿ.ಪ್ರಸಾದ್ ಮಾತನಾಡಿ, ಪ್ರಸ್ತುತ ದಿನದಲ್ಲಿ ಇಂಗ್ಲಿಷ್ ಭಾಷೆ ಕಲಿಯುವುದು ಅಗತ್ಯ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಭಾಷೆ ಕಲಿಯುವುದು ಅನುಕೂಲವಾಗಿದೆ. ಪೋ಼ಷಕರು ಶೈಕ್ಷಣಿಕ ಚಟುವಟಿಕೆಗಳ ಭಾಗೀದಾರರಾಗಿದ್ದು ಮಕ್ಕಳ ಶಿಕ್ಷಣದ ಬಗ್ಗೆ ಅಪಾರ ನಿರೀಕ್ಷೆ ಹೊಂದಿರುತ್ತಾರೆ. ಶಿಕ್ಷಕರು ಅವರ ನಿರೀಕ್ಷೆಗೆ ಅನುಗುಣವಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ತಿಳಿಸಿದರು.
ನೋಡಲ್ ಅಧಿಕಾರಿ ಅರ್ಜುಮಂದ್ ಬಾನು, ಉಪನ್ಯಾಸಕರಾದ ಎಸ್.ಬಸವರಾಜು, ರಾಮಣ್ಣ, ಶಿವಲೀಲ, ಸಂಪನ್ಮೂಲ ವ್ಯಕ್ತಿಗಳಾದ ಜಿ.ಜಿ ನಾಗರಾಜು, ಸಿ.ಬಿ ಮಂಜುನಾಥ್, ಸಿ.ಎಂ.ಸುಂದರ್ರಾಜ್, ರೀಟಾಮಣಿ, ಜ್ಯೋತ್ಸ್ನಾ, ವಿ.ರಾಧ, ಕೆ.ಜಿ ರಂಜಿತಾ, ಪ್ರಕಾಶ್, ಆರೀಫ ಬಾನು, ವಿನಯ್ ಮತ್ತು ಶಿಬಿರಾರ್ಥಿಗಳು ಇದ್ದರು.
