ಭಾರತದ ಪ್ರಸಿದ್ಧ ಹಬ್ಬಗಳಲ್ಲಿ ಗಣೇಶ ಚತುರ್ಥಿಯೂ ಒಂದು. ಇದು ವಿಶ್ವಪ್ರಸಿದ್ಧವಾದ ಹಬ್ಬವೇ ಆಗಿಬಿಟ್ಟಿದೆ. ಕೆಲವು ಪ್ರದೇಶಗಳಲ್ಲಿ ಸಂಭ್ರಮದ ಹಬ್ಬವಾದರೆ, ಇನ್ನೂ ಕೆಲವೆಡೆ ಇದು ಶ್ರದ್ಧೆ, ಪಾವಿತ್ರ್ಯತೆಗೆ ಮಹತ್ತ್ವ ಕೊಡುವುದಾಗಿದೆ. ಗಣಪತಿಯ ನಿರ್ಮಾಣದಿಂದ ಆರಂಭಿಸಿ ವಿಸರ್ಜನೆಯ ವರೆಗೆ ಹಲವು ವಿಶಿಷ್ಟ ಪದ್ಧತಿಗಳು ತಳುಕು ಹಾಕಿಕೊಂಡಿವೆ. ಉತ್ತರ, ಈಶಾನ್ಯ, ಪಶ್ಚಿಮ ಭಾರತಕ್ಕೆ ಹೋಲಿಸಿದರೆ ದಕ್ಷಿಣದಲ್ಲಿ ಅದರಲ್ಲಿ ಮಲೆನಾಡು ಮಾತ್ರಾ ಕರಾವಳಿಯ ಕೆಲವು ಪ್ರದೇಶಗಳಲ್ಲಿ ವಿಭಿನ್ನ ಪದ್ಧತಿ ಇರುವುದನ್ನು ಕಾಣಬಹುದು.
ಮೂರ್ತಿಯನ್ನು ಯಾವುದರಿಂದ ಮಾಡಬೇಕು ಎಂದರೆ ಜೇಡಿಮಣ್ಣಿನಿಂದ ಮಾಡಬೇಕು. ಈಗ ಬೇರೆ ದ್ರವ್ಯಗಳಿಂದ ಮಾಡುವ ಕ್ರಮ ಬಂದಿದೆ. ಆದರೆ ಮಲೆನಾಡಿನಲ್ಲಿ ಇದು ನಿಂತು ಹೋಗಿಲ್ಲ. ಈಗಲೂ ಇದೇ ಮುಂದುವರಿಯುತ್ತಿದೆ. ಶುದ್ಧ ಪ್ರದೇಶದ ಮಣ್ಣನ್ನು, ಶುಭ ವಾರದಂದು ತಂದು ಸರಿಯಾಗಿ ಹದಗೊಳಿಸಿ ಮೂರ್ತಿಯ ನಿರ್ಮಾಣವನ್ನು ಮಾಡಲಾಗುತ್ತದೆ.
ಮೂರ್ತಿ ನಿರ್ಮಾಣ :
ಚೌತಿ ಹಬ್ಬ ಬಂದರೆ ಸಾಕು ಹಾದಿ ಬೀದಿಗಳಲ್ಲಿ ಗಣಪತಿಯ ಮೂರ್ತಿಯನ್ನು ಮಾರಾಡಕ್ಕೆ ಇರುವುದನ್ನು ನೋಡಬಹುದು. ನಾನಾ ರೀತಿಯ ಗಣಪತಿಯನ್ನು ನೋಡಲು ಸಾಧ್ಯ. ಇವೆಲ್ಲವೂ ಮಾರಾಟವಾಗದು? ಆಮೇಲೆ ಏನಾಗುತ್ತದೆ ಇದು ಯಾರಿಗೂ ಗೊತ್ತಿಲ್ಲ. ವಾಸ್ತವವಾಗಿ ವಂಶಪಾರಂಪರ್ಯದಿಂದ ಮೂರ್ತಿ ಮಾಡುವವರು ಕೆಲವು ಎಷ್ಟು ಮಾಡಿಕೊಂಡು ಬಂದಿದ್ದರೋ ಅಷ್ಟನ್ನೇ ಮುಂದುವರಿಸುತ್ತಾರೆ. ಇನ್ನೂ ಕೆಲವರು ಗೌರವಪೂರ್ವಕವಾಗಿ ನಿವೇದನೆ ಮಾಡಿದರೆ ಮಾಡಿಕೊಡುತ್ತಾರೆ. ಒಟ್ಟಿನಲ್ಲಿ ಮಾರಾಟಕ್ಕಾಗಿ, ಲಾಭಕ್ಕಾಗಿ ಅಲ್ಲ, ಕುಲಕಸುಬು ಎನ್ನುವ ರೀತಿಯಲ್ಲಿ, ಶ್ರದ್ಧೆ, ಭಕ್ತಿಯಿಂದ ಅದರ ನಿರ್ಮಾಣವನ್ನು ಮಾಡುತ್ತಾರೆ. ಅದಕ್ಕೆ ಯಾವುದೇ ಅಧಿಕೃತ ಮೌಲ್ಯವೂ ಇರುವುದಿಲ್ಲ. ತೆಗದುಕೊಂಡು ಹೋಗುವವರು ಯಥೋಚಿತ ಗೌರವವನ್ನು ಕೊಟ್ಟು ತೆಗದುಕೊಂಡು ಹೋಗುತ್ತಾರೆ.
ನಗರಕ್ಕೆ ಬಂದರೆ ಅಲ್ಲಿ ಬೀದಿಯ ಗಣಪತಿಯನ್ನು ಹೆಚ್ಚು ನೋಡಬಹುದು. ಮನೆಗಳಲ್ಲಿ ಇದು ನೋಡಲಾಗದು. ಹಳ್ಳಿಗಳಲ್ಲಿ ಮನೆಯಲ್ಲಿ ಹೆಚ್ಚು ನೋಡಲು ಸಿಗುತ್ತದೆ. ಇದು ವ್ರತವಾಗಿ ಆರಂಭವಾಗಿದ್ದು. ಶಿವಲಿಂಗವನ್ನು ಮಾಡಿ ಪೂಹಿಸುವಂತೆ ಗಣಪತಿಯ ಮೂರ್ತಿಯನ್ನು ಮಾಡಿ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳುವುದು. ಗಣಪತಿಯ ಮಣ್ಣಿನ ಮೂರ್ತಿ ಇಲ್ಲದೆಯೂ ಅನೇಕ ಕಡೆಗಳಲ್ಲಿ ಹಬ್ಬವು ಅದೇ ಕ್ರಮದಲ್ಲಿ ನಡೆಯುತ್ತದೆ. ವ್ರತದಲ್ಲಿ ಪ್ರತಿಷ್ಠೆ ವಿಸರ್ಜನೆಗಳು ಇರುವುದು.
ಇನ್ನೊಂದು ವಿಶೇಷ ಆರಂಭದ ಪದ್ಧತಿ ಇದೆ. ಯಾರಾದರೂ ಚೌತಿ ಹಬ್ಬದ ರಾತ್ರಿ ಗಣಪತಿಯನ್ನು ಮನೆಯ ಬಾಗಿನ ಮುಂದೆ ತಂದಿಟ್ಟು ದೊಡ್ಡದಾಗಿ ವಾದ್ಯಗಳ ಸದ್ದು ಮಾಡಿ ನಾಪತ್ತೆಯಾಗುತ್ತಾರೆ. ಆಗ ಆ ಮನೆಯವರು ಗಣಪತಿಯ ವ್ರತವನ್ನು ಆಚರಿಸಬೇಕು. ಸತತ ಮೂರು ವರ್ಷ ಅವನೇ ಸ್ವತಃ ಹೋಗಿ ಮೂರ್ತಿಯನ್ನು ತಂದು ಆರಾಧಿಸಬೇಕು ಎಂಬ ಪದ್ಧತಿ ಇದೆ.
ಹಬ್ಬ ಮಾಡುವುದು ಯಾರು?
ಗಣಪತಿ ಬ್ರಹ್ಮಚಾರಿಯಾದರೂ ಹಬ್ಬ ಮಾಡುವವನು, ವ್ರತಾಚರಣೆ ಮಾಡುವವನು ಗೃಹಸ್ಥ. ಮೂರ್ತಿ ಮಾಡುವವರ ಬಳಿ ಹೋಗಿ ತಾನು ಧರಿಸಿದ ಉಪವೀತವೊಂದನ್ನು ಮೂರ್ತಿಗೆ ಹಾಕಿ, ಬಟ್ಟೆಯಲ್ಲಿ ಮುಚ್ಚಿ ಕೊಂಡು ಮನೆಗೆ ತಂದು ದೇವರ ಮುಂಭಾಗದಲ್ಲಿ ಎತ್ತರದ ಸ್ಥಾನದಲ್ಲಿ ಇಡುವುದು. ಅದಕ್ಕೆ ಕಣ್ಣುಗಳನ್ನು ಜೋಡಿಸಿ ಪೂಜಿಸುತ್ತಾರೆ. ಪ್ರಾಕೃತಿಕ ವಸ್ತುವಿನಿಂದ ಮಂಟಪವೂ ನಿರ್ಮಾಣ ಆಗುತ್ತದೆ.
ಸಹಜ ಮೂರ್ತಿ :
ನಗರಗಳಲ್ಲಿ ಮೂರ್ತಿಯನ್ನು ನಾನಾರೀತಿಯಲ್ಲಿ ನೋಡಲು ಸಿಗುತ್ತದೆ. ಆದರೆ ಇಲ್ಲಿ ಕುಳಿತಿರುವ ಗಣಪತಿಯನ್ನು ಮಾತ್ರ ಪ್ರತಿಷ್ಠೆ ಮಾಡುತ್ತಾರೆ. ಯಾವುದೇ ಆಧುನಿಕ ಆಚರಣೆಗೆ ಆಸ್ಪದ ಕೊಡದೇ ಮೂರ್ತಿ ತಯಾರಕರೂ ನಿರ್ಮಿಸುತ್ತಾರೆ, ಪೂಜಿಸುವವರೂ ಇದನ್ನು ಇಷ್ಟಪಡುತ್ತಾರೆ.
ನೈವೇದ್ಯ :
ಇಪ್ಪತ್ತೊಂದು ಗಣಪತಿಗೆ ಪ್ರಿಯವಾದ ಸಂಖ್ಯೆ. ಇಪ್ಪತ್ತೊಂದ ಭಕ್ಷ್ಯಗಳನ್ನೂ ನೈವೇದ್ಯ ಮಾಡುತ್ತಾರೆ. ಕಲವು ಕಡೆಗಳಲ್ಲಿ ಇದರ ದುಪ್ಪಟ್ಟು ನೈವೇದ್ಯ ಮಾಡುವುದೂ ಇದೆ. ಕೆಲವರು, ಮೋದಕ, ಪಂಚಕಜ್ಜಾಯ, ಕಡುಬು, ಚಕ್ಕುಲಿ, ಪಾಯಸಗಳನ್ನು ಮಾತ್ರ ಮಾಡುವವರೂ ಇದ್ದಾರೆ. ಅವರವರ ಭಕ್ತಿ, ಶ್ರದ್ಧೆಯನ್ನು ಅನುಸರಿಸಿ ನೈವೇದ್ಯವಿರುತ್ತದೆ.
ವಿಸರ್ಜನೆ :
ಗಣಪತಿಯನ್ನು ವಿಸರ್ಜಿಸುವುದು ಶುದ್ಧವಾದ ನೀರಿನಲ್ಲಿ. ಯಾವುದೇ ಅಂಗಾಂಗಳು ಭಿನ್ನವಾಗದಂತೆ ಬಹಳ ಜಾಗರೂಕತೆಯಿಂದ ನೀರಿನ ಒಳಗೆ ಇಟ್ಟು ಬರಬೇಕು. ಕೆಲವು ಕಡೆಗಳಲ್ಲಿ ೧೦ ಅಡಿಗಳಷ್ಟು ಆಳದ ಬಾವಿಗಳು ಇರುತ್ತವೆ. ಆಗಲೂ ಅದನು ಮೇಲಿನಿಂದ ಎಸೆಯದೇ ಸರಿಯ ಇಟ್ಟು ಬರಬೇಕು. ಭಿನ್ನವಾದರೆ ಮೇಲಿನಿಂದ ಎಸೆದರೆ ಅದು ಅಶುಭ.
ಗಣಪತಿ ಸ್ಥಾಪನೆ :
ಗಣಪತಿಯನ್ನು ಕೆಲವರು ಒಂದು ದಿನ, ಎರಡು, ಮೂರು ಐದು ದಿನಗಳ ವರೆಗೆ ಸ್ಥಾಪಿಸಿ ಪೂಜಿಸುತ್ತಾರೆ. ಚತುರ್ಥಿಯ ದಿನ ವಿಶೇಷ ಪೂಜೆಯಿದ್ದು ಉಳಿದ ದಿನ ಸಾಮಾನ್ಯ ದಿನದಂತೆ ಪೂಜಿಸುತ್ತಾರೆ.
ಗಣಪತಿಗೆ ಬಣ್ಣ :
ಆಕರ್ಷಣೆಗಾಗಿ ಬಣ್ಣದ ಲೇಪನ ಅಧಿಕವಾಗಿದೆ. ವಾಸ್ತವವಾಗಿ ಗಣಪತಿಗೆ ಕೆಂಪು ಬಣ್ಣ ಶ್ರೇಷ್ಠ. ಬಣ್ಣವನ್ನು ಲೇಪಿಸದೇ ಇದ್ದರೂ ತೊಂದರೆ ಇಲ್ಲ. ಅಪ್ರಾಕೃತಿಕ ಬಣ್ಣದಿಂದ ದೈವತ್ವಕ್ಕೆ ಅಡ್ಡಿಯಾಗಬಾರದು. ಕೆಲವರು ಬಣ್ಣವನ್ನು ಇಷ್ಟಪಡುವುದಿಲ್ಲ. ಪ್ರಾಕೃತಿಕ ಕುಂಕುಮ ಅರಿಶಿನದಿಂದ ಮಾಡುತ್ತಾರೆ. ಕೆಲವರು ಮಾಡುವುದಿಲ್ಲ.
ಹೀಗೆ ನಾಡಿನಾದ್ಯಂತ ವಿಶ್ವದಾದ್ಯಂತ ಹೆಸರು ಪಡೆದ ಹಬ್ಬ ತನ್ನದೇ ಆದ ವಿಶೇಷ ವೈಶಿಷ್ಟ್ಯಗಳನ್ನು ಇಟ್ಟುಕೊಂಡು ಯಾರಿಗೂ ಬಿಟ್ಟುಕೊಡದೇ ದೇವರ ಅನುಗ್ರಹಕ್ಕೆ ಪಾತ್ರವಾಗುತ್ತಿರುವುದು ವಿಶೇಷ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







