ಏಕನಾಥೇಶ್ವರಿ, ಬರಗೇರಮ್ಮ ದೇವಿ ವೈಭವದ ಮೆರವಣಿಗೆ
* ಕಣ್ಮನ ಸೆಳೆದ ದೇವಿಯರ ಅಲಂಕಾರ * ಹರಕೆ ಸಲ್ಲಿಸಿದ ಭಕ್ತರು * ಮಜ್ಜಿಗೆ ಪಾನಕ ವಿತರಣೆ
ಚಿತ್ರದುರ್ಗ : ಐತಿಹಾಸಿಕ ಚಿತ್ರದುರ್ಗ ನಗರದಲ್ಲಿ ಶುಕ್ರವಾರ ಏಕನಾಥೇಶ್ವರಿ ಹಾಗೂ ಬರಗೇರಮ್ಮನವರ ಮೆರವಣಿಗೆ ವೈಭವೋಪೇತವಾಗಿ ನಡೆಯಿತು.
ಕೋಟೆ ರಸ್ತೆಯಲ್ಲಿರುವ ಪಾದಗುಡಿ ಮುಂಭಾಗದಲ್ಲಿ ತಹಶೀಲ್ದಾರ್ ಮೆರವಣಿಗೆ ಉದ್ಘಾಟಿಸಿದರು.
ಡೊಳ್ಳು, ತಮಟೆ, ವಿವಿಧ ಕಲಾ ತಂಡಗಳೊಂದಿಗೆ ಸಾಗಿದ ಮೆರವಣಿಗೆ ಆನೆಬಾಗಿಲು, ಬುರುಜನಹಟ್ಟಿ, ಸಿಹಿನೀರು ಹೊಂಡದ ರಸ್ತೆ, ಸಿದ್ದರಾಮೇಶ್ವರ ಸರ್ಕಲ್, ಗಾಯತ್ರಿ ಭವನ ವೃತ್ತ, ಕರುವಿನಕಟ್ಟೆ, ಜೋಗಿಮಟ್ಟಿ ರಸ್ತೆಯಲ್ಲಿ ಸಂಚರಿಸಿತು.
ಜೋಡೆತ್ತಿನ ಬಂಡಿಯಲ್ಲಿ ಏಕನಾಥೇಶ್ವರಿಯನ್ನು ವಿವಿಧ ಬಗೆಯ ಬೃಹಧಾಕಾರವಾದ ಹಾರ ಹಾಗೂ ಬಣ್ಣ ಬಣ್ಣದ ಹೂವುಗಳಿಂದ ಸಿಂಗರಿಸಲಾಗಿತ್ತು. ರಸ್ತೆಯುದ್ದಕ್ಕೂ ಅಲ್ಲಲ್ಲಿ ಭಕ್ತರು ಏಕನಾಥೇಶ್ವರಿ ಅಮ್ಮನಿಗೆ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.
ಉರಿ ಬಿಸಿಲನ್ನು ಲೆಕ್ಕಿಸದೆ ಮೆರವಣಿಗೆಯಲ್ಲಿ ಹೊರಟವರಿಗೆ ಭಕ್ತರು ತಮ್ಮ ಮನೆಗಳ ಮುಂದೆ ತಂಪಾದ ಪಾನೀಯ ಹಾಗೂ ಮಜ್ಜಿಗೆಯನ್ನು ವಿತರಿಸಿದರು.
ಹೊಳಲ್ಕೆರೆ ರಸ್ತೆಯಲ್ಲಿರುವ ಬರಗೇರಮ್ಮನ ಮೆರವಣಿಗೆ ಶುಕ್ರವಾರ ನಗರದ ರಾಜಬೀದಿಗಳಲ್ಲಿ ಸಾಗಿತು. ಜೋಡೆತ್ತಿನ ಗಾಡಿಯಲ್ಲಿ ವಿರಾಜಮಾನಳಾಗಿದ್ದ ಬರಗೇರಮ್ಮನನ್ನು ಬಂಗಾರದ ಆಭರಣ ಹಾಗೂ ಬಣ್ಣ ಬಣ್ಣ ದೊಡ್ಡ ಗಾತ್ರದ ಹೂವಿನ ಹಾರಗಳಿಂದ ಕಂಗೊಳಿಸುವಂತೆ ಅಲಂಕರಿಸಲಾಗಿತ್ತು.
ಸಂಗೊಳ್ಳಿರಾಯಣ್ಣ ವೃತ್ತ, ಗಾಂಧಿವೃತ್ತದ ಮೂಲಕ ಲಕ್ಷ್ಮಿಬಜಾರ್ನಿಂದ ಪ್ರಮುಖ ಬೀದಿಗಳಲ್ಲಿ ಹೊರಟ ಬರಗೇರಮ್ಮನಿಗೆ ರಸ್ತೆಯ ಬದಿಗಳಲ್ಲಿ ನಿಂತಿದ್ದ ಭಕ್ತರು ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.
ಡೊಳ್ಳು, ತಮಟೆ, ಚಂಡೆವಾದ್ಯ, ಗೊಂಬೆ ಕುಣಿತ, ಸೋಮನ ಕುಣಿತ ಮೆರವಣಿಗೆಯಲ್ಲಿ ಆಕರ್ಷಣೀಯವಾಗಿತ್ತು.
ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಮಂಜಪ್ಪ, ಮಾಜಿ ಉಪಾಧ್ಯಕ್ಷ ಎಸ್.ಬಿ.ಎಲ್.ಮಲ್ಲಿಕಾರ್ಜುನ್, ಮಾಜಿ ಸದಸ್ಯ ಗಾಡಿ ಮಂಜ, ಮೃತ್ಯುಂಜಯ, ಕುಮಾರಸ್ವಾಮಿ, ನಗರಸಭೆ ಮಾಜಿ ಸದಸ್ಯ ಸಿ.ಟಿ.ರಾಜೇಶ್, ಮಾಜಿ ನಾಮ ನಿರ್ದೇಶಿತ ಸದಸ್ಯ ಓಂಕಾರ್ ಇನ್ನು ಮುಂತಾದವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
