ಬೆಂಗಳೂರು ನಗರ ಮಹಿಯರಿಗೆ ಹೆಚ್ಚು ಸುರಕ್ಷಿತ ನಗರ-ಡಾ.ಜಿ.ಪರಮೇಶ್ವರ್
ರಾಷ್ಟ್ರಮಟ್ಟದ ಪ್ರತಿಷ್ಠಿತ ಚೆನ್ನೈ ಸಂಸ್ಥೆಯೊಂದು ೧೨೫ ನಗರಗಳನ್ನೊಳಗೊಂಡಂತೆ ನಡೆಸಿರುವ ಸಮೀಕ್ಷೆಯ ವರದಿ ಪ್ರಕಾರ ಬೆಂಗಳೂರು ನಗರವು ಮಹಿಳೆಯರಿಗೆ ಹೆಚ್ಚು ಸುರಕ್ಷಿತ ನಗರವೆಂಬ ಹೆಗ್ಗಳಿಕೆಯನ್ನು
ಹೆಗ್ಗಳಿಕೆಯನ್ನು ಪಡೆದಿದೆ ಎಂದು ಗೃಹ ಸಚಿವರಾದ ಡಾ.ಜಿ. ಪರಮೇಶ್ ಅವರು ಇಂದು ಮಧ್ಯಾಹ್ನ ವಿಧಾನಸಭೆಯಲ್ಲಿ ತಿಳಿಸಿದರು.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ , ಸುನಿಲ್ ಕುಮಾರ್ ಹಾಗೂ ಅರಗ ಜ್ಞಾನೇಂದ್ರ ಅವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯು ಹದಗೆಟ್ಟಿದೆ ಎಂದು ಆರೋಪಿಸಿದ್ದ ಹಿನ್ನೆಲೆಯಲ್ಲಿ ಸರ್ಕಾರದ ಪರವಾಗಿ ಉತ್ತರವನ್ನು ನೀಡಿದ ಗೃಹ ಸಚಿವರು ಈ ಸಮೀಕ್ಷೆಯಲ್ಲಿ ಕರ್ನಾಟಕವು ೫೩.೮೨ ಅಂಕವನ್ನು ಪಡೆದು ಮೊದಲ ಸ್ಥಾನವನ್ನು, ಚನ್ನೈ ೪೯.೮೬ ಪಡೆದು ಎರಡನೇ ಸ್ಥಾನವನ್ನು ಪಡೆದಿವೆ ಎಂದರು.
ಇಂಡಿಯಾ ಜಸ್ಟೀಸ್ ರಿಪೋರ್ಟ್ -೨೦೨೫ ರ ಪ್ರಕಾರ ಕೂಡ ನಮ್ಮ ರಾಜ್ಯವು ಮೊದಲ ಸ್ಥಾನವನ್ನು ಪಡೆದಿರುವುದು ಕಾನೂನು ಸುವ್ಯವಸ್ಥೆಯಲ್ಲಿ ಸಮರ್ಥವಾಗಿ ಕಾರ್ಯನಿವರ್ಹಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದರು. ಈ ಎರಡೂ ಸಮೀಕ್ಷೆಗಳು ನಮ್ಮ ಕರ್ನಾಟಕ ರಾಜ್ಯವು ಎಷ್ಟು ಸುರಕ್ಷಿತವಾಗಿದೆ ಎಂಬುದನ್ನು ಸಾಬೀತು ಪಡಿಸಿದೆ ಎಂದು ತಿಳಿಸಿದರು.
ಆರ್. ಅಶೋಕ್ ಅವರು ಗೃಹ ಸಚಿವರಾಗಿದ್ದಾಗ ೨೦೧೧-೧೩ ರಲ್ಲಿ ೪೧೨೧ ಕೊಲೆಗಳಾಗಿದ್ದರೆ, ಬೊಂಬಾಯಿ ಅವರು ಗೃಹ ಸಚಿರಾಗಿದ್ದಾಗ ೨೦೧೯-೨೧ ರವರೆಗೆ ೨೫೫೪ ಹಾಗೂ ಅರಗ ಜ್ಞಾನೇಂದ್ರ ಅವರು ಗೃಹ ಸಚಿವರಾಗಿದ್ದಾಗ ೨೪೧೭ ಕೊಲೆಗಳಾಗಿದ್ದವು. ಆದರೆ ನಮ್ಮ ಸರ್ಕಾರ ಬಂದ ಮೇಲೆ ೨೦೨೩ ರಲ್ಲಿ ೧೩೨೨ ಹಾಗೂ ೨೦೨೪ ರಲ್ಲಿ ೧೨೦೮ ಕೊಲೆ ಪ್ರಕರಣಗಳಾಗಿರುವುದಾಗಿ ಅವರು ಮಾಹಿತಿ ನೀಡುವ ಮೂಲಕ ಅವರ ಕಾಲದಲ್ಲಿಯೇ ಅತಿ ಹೆಚ್ಚು ಕೊಲೆ ಪ್ರಕರಣಗಳಾಗಿರುವುದರ ಬಗ್ಗೆ ಸದನಕ್ಕೆ ಮಾಹಿತಿ ನೀಡಿದರು.
ಇನ್ನು ಡಗ್ಸ್ ತಡೆಗೆ ನಮ್ಮ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ. ೨೦೨೩ ರಲ್ಲಿ ೧೩೩ ಕೋಟಿ ರೂ ಬೆಲೆಯ ೧೦೬೩೦ ಕೆ.ಜಿ ಗಾಂಜಾವನ್ನು, ೨೦೨೪ ರಲ್ಲಿ ೨೬೪ ಕೋಟಿ ಬೆಲೆಯ ೬೧೩೬ ಕೆ.ಜಿ ಹಾಗೂ ೨೦೨೫ ರಲ್ಲಿ ೨೦೮ ಕೋಟಿ ಬೆಲೆಯ ೬೨೭೯ ಕೆ.ಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ವರದಿಯೊಂದರಲ್ಲಿ ಗುಜರಾತ್, ಮಹಾರಾಷ್ಟ್ರ , ರಾಜಸ್ಥಾನದಲ್ಲಿ ಅತಿ ಹೆಚ್ಚು ಡ್ರಗ್ಸ್ ತಯಾರಾಗುತ್ತಿದೆ ಎಂದು ತಿಳಿದು ಬಂದಿದೆ. ನಮ್ಮ ಸರ್ಕಾರ ಡ್ರಗ್ಸ್ ಅನ್ನು ತಡೆಗಟ್ಟಲು ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ. ಡ್ರಗ್ಸ್ ಘಟಕಗಳನ್ನು ಪತ್ತೆಹಚ್ಚುವ ಸಲುವಾಗಿ ಎಲ್ಲಾ ಎಸ್.ಪಿ ಗಳಿಗೆ ತಮ್ಮ ಏರಿಯಾದಲ್ಲಿ ಸ್ಥಾಪನೆಯಾಗುವ ಯಾವುದೇ ಕೆಮಿಕಲ್ ಘಟಕಗಳನ್ನು ಪರಿಶೀಲಿಸುವಂತೆ ಹಾಗೂ ತಮ್ಮ ಏರಿಯಾದಲ್ಲಿ ಡ್ರಗ್ಸ್ ದಂಧೆ ನಡೆಯದಂತೆ ನೋಡಿಕೊಳ್ಳಬೇಕೆಂದು ಸೂಚನೆ ನೀಡಲಾಗಿದೆ. ಪೊಲೀಸರು ಶಾಲಾ-ಕಾಲೇಜುಗಳಿಗೆ ಹೋಗಿ ಡ್ರಗ್ಸ್ ಬಳಸುವುದರಿಂದಾಗುವ ಪರಿಣಾಮಗಳ ಬಗ್ಗೆ ಅರಿವು ಕೂಡ ಮೂಡಿಸುತಿದ್ದಾರೆ ಎಂದು ತಿಳಿಸಿದರು.
ಇನ್ನು ಸೈಬರ್ ಅಪರಾಧವನ್ನು ತಡೆಗಟ್ಟಲು ಡಿ.ಜಿ ಅವರ ನೇತೃತ್ವದಲ್ಲಿ ಒಂದು ಪ್ರತ್ಯೇಕ ವಿಭಾಗವನ್ನು ರಚಿಸಲಾಗಿದೆ. ಭ್ರಷ್ಟಾಚಾರ ನಿಮ್ಮ ಸರ್ಕಾರದಲ್ಲಿ ಕೂಡ ಆಗಿದೆ. ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗದಿರಬಹುದು. ಆದರೆ ನಮ್ಮ ಸರ್ಕಾರ ಭ್ರಷ್ಟಾಚಾರ ಎಸಗುವವರಿಗೆ ಎಂದಿಗೂ ರಕ್ಷಣೆ ನೀಡಿಲ್ಲ. ಇತ್ತೀಚೆಗೆ ಲಂಚ ಪಡೆಯುವಾಗ ಸಿಕ್ಕಿಬಿದ್ದ ಇನ್ಸ್ ಪೆಕ್ಟರ್ ಅವರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಮತ್ತೊಂದು ಕೇಸ್ ನಲ್ಲಿ ನಮ್ಮ ಸರ್ಕಾರ ಹಿರಿಯ ಅಧಿಕಾರಿಯೊಬ್ಬರನ್ನು ಅಮಾನತ್ತು ಕೂಡ ಮಾಡಲಾಗಿದೆ. ನಮ್ಮ ಸರ್ಕಾರ ಪೊಲೀಸ್ ಕ್ಯಾಪ್ ಅನ್ನು ಮಾತ್ರ ಬದಲಾಯಿಸಿಲ್ಲ. ಅವರ ಮಾನಸಿಕ ಸ್ಥೈರ್ಯ ವನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ ಅವರು, ಗೃಹ ಇಲಾಖೆಯು ನಮ್ಮ ರಾಜ್ಯದಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಲು ಬಯಸುತ್ತೇನೆ ಎಂದು ಸದನಕ್ಕೆ ತಿಳಿಸಿದರು.
