ಶಿವಲಿಂಗಪ್ಪ ಕೊಲೆ ಪ್ರಕರಣ; ಹಂತಕರ ಬಂಧನಕ್ಕೆ ಆಗ್ರಹ
ಚಿತ್ರದುರ್ಗ : ಸಣ್ಣ ಸಮಾಜದಲ್ಲಿ ದೊಡ್ಡದಾಗಿ ಬೆಳೆದಿದ್ದ ಬಿ.ಶಿವಲಿಂಗಪ್ಪನ ಏಳಿಗೆಯನ್ನು ಸಹಿಸದೆ ಬರ್ಬರವಾಗಿ ಹತ್ಯೆಗೈದಿದ್ದು, ವೇಗವಾಗಿ ತನಿಖೆ ನಡೆಸಿ ಹಂತಕರನ್ನು ಬಂಧಿಸಿ ಉಗ್ರ ಶಿಕ್ಷೆಗೊಳಪಡಿಸುವಂತೆ ಜಿಲ್ಲಾ ಮಡಿವಾಳರ ಸಂಘದ ಗೌರವಾಧ್ಯಕ್ಷ ಡಾ.ವಿ.ಬಸವರಾಜ್ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದರು.
ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾನವೀಯ ಗುಣ, ಸಮಾಜದ ಬಗ್ಗೆ ಕಳಕಳಿಯಿಟ್ಟುಕೊಂಡಿದ್ದ ಬಿ.ಶಿವಲಿಂಗಪ್ಪನವರ ಸಾವು ಕುಟುಂಬಕ್ಕಷ್ಟೆ ಅಲ್ಲ ಮಡಿವಾಳ ಸಮಾಜಕ್ಕೆ ಅತೀವ ನೋವುಂಟು ಮಾಡಿದೆ. ಇಂತಹ ಹೀನಾಯ ಕೃತ್ಯಗಳು ನಿಲ್ಲಬೇಕಾದರೆ ಕೊಲೆಗಡುಕರಿಗೆ ಶಿಕ್ಷೆಯಾಗಬೇಕು. ಮಡಿವಾಳ ಜನಾಂಗ ಸಣ್ಣ ಸಮಾಜ. ದುಃಖತಪ್ತ ಕುಟುಂಬಕ್ಕೆ ನ್ಯಾಯ ಸಿಗಬೇಕು. ಅಲ್ಲಿಯವರೆಗೂ ನಾವುಗಳು ಹೋರಾಟಕ್ಕೆ ಸಿದ್ದರಿದ್ದೇವೆ. ತಪ್ಪಿತಸ್ಥರನ್ನು ಬಂಧಿಸುವಂತೆ ಸೋಮವಾರದವರೆಗೂ ಗಡುವು ನೀಡುತ್ತೇವೆ. ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ದೊಡ್ಡ ಪ್ರತಿಭಟನೆ ನಡೆಸುತ್ತೇವೆಂದು ಹೇಳಿದರು.
ಸಮಾಜಕ್ಕೆ ಬದುಕನ್ನು ಮುಡುಪಾಗಿಟ್ಟಿದ್ದ ಬಿ.ಶಿವಲಿಂಗಪ್ಪನವರು ಕಷ್ಟದಲ್ಲಿದ್ದವರಿಗೆ ಸದಾ ಮಿಡಿಯುತ್ತಿದ್ದರು. ಒಮ್ಮೆ ಅವರ ನಿವಾಸದಲ್ಲಿ ಬುದ್ದ, ಧಮ್ಮ ಸಂವಾದವನ್ನು ಇಟ್ಟುಕೊಂಡಿದ್ದರು. ಅದನ್ನು ನೋಡಿದಾಗ ನಮಗೆ ಇವರಲ್ಲಿ ಎಂತಹ ಜಾತ್ಯತೀತ ಗುಣವಿದೆ ಅನ್ನಿಸಿತು. ವ್ಯಾಪಾರ ವ್ಯವಹಾರದಲ್ಲಿ ಬಹಳ ವೇಗವಾಗಿ ಬೆಳೆದ ಇವರ ಶ್ರೇಯಸ್ಸನ್ನು ಕಂಡು ಸಹಿಸಲಾಗದವರು ಹತ್ಯೆಗೆ ಕೈಹಾಕಿರಬಹುದೆಂಬ ಅನುಮಾನವಿದೆ. ಪೊಲೀಸರ ನ್ಯಾಯಯುತ ತನಿಖೆಯಿಂದ ಸತ್ಯಾಂಶ ಹೊರ ಬರಬೇಕೆಂದು
ಡಾ.ವಿ.ಬಸವರಾಜ್ ಆಗ್ರಹಿಸಿದರು.
ಸಾಮಾಜಿಕ ಸಂಘರ್ಷ ಸಮಿತಿಯ ಪ್ರೊ.ಸಿ.ಕೆ.ಮಹೇಶ್ ಮಾತನಾಡಿ ಯಾವುದೇ ಒಂದು ಉದ್ಯಮದಲ್ಲಿ ವಿರೋಧಿಗಳು, ಶತ್ರುಗಳು ಹುಟ್ಟುಕೊಳ್ಳುವುದು ಸಹಜ. ಕೆಳಹಂತದವರು ಮೇಲೆ ಬಂದಾಗ ಇಂತಹ ಕೃತ್ಯಗಳು ನಡೆಯುತ್ತಿರುತ್ತವೆ. ಅದೇ ಮೇಲ್ವರ್ಗದಲ್ಲಿ ಯಾರಾದರೂ ಉನ್ನತ ಮಟ್ಟಕ್ಕೆ ಹೋದಾಗ ಹತ್ಯೆಗಳಾಗುವುದು ಕಡಿಮೆ. ಬಿ.ಶಿವಲಿಂಗಪ್ಪನವರ ಹತ್ಯೆ ಮಡಿವಾಳ ಸಮಾಜ ಹಾಗೂ ಕುಟುಂಬದವರಲ್ಲಿ ಭಯ ಮೂಡಿಸಿದೆ. ಹತ್ಯೆಯ ಕುರಿತು ನಕಾರಾತ್ಮಕ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತವೆ. ಅದಕ್ಕೆ ನೀವುಗಳ್ಯಾರು ಕಿವಿಗೊಡಬೇಡಿ. ಚಿಕ್ಕವರಿಂದ ಹಿಡಿದು ದೊಡ್ಡವರತನಕ ಎಲ್ಲರನ್ನು ಗೌರವಿಸುವ ಗುಣವಿಟ್ಟುಕೊಂಡಿದ್ದ ಶಿವಲಿಂಗಪ್ಪನವರ ಹತ್ಯೆ ಹಿಂದೆ ಯಾರ ಕೈವಾಡವಿದೆ ಎನ್ನುವುದನ್ನು ಪೊಲೀಸರು ಪತ್ತೆ ಹಚ್ಚುವಂತೆ ಮನವಿ ಮಾಡಿದರು.
ಮಡಿವಾಳರ ಸಂಘದ ಜಿಲ್ಲಾಧ್ಯಕ್ಷ ಬಿ.ರಾಮಜ್ಜ ಮಾತನಾಡುತ್ತ ಮೆದೆಹಳ್ಳಿ ರಸ್ತೆಯಲ್ಲಿ ಫರ್ಟಿಲೈಸರ್ ಅಂಗಡಿಯಿಟ್ಟುಕೊಂಡು ಹಳ್ಳಿಯ ರೈತರಿಗೆ ಸದಾ ಸ್ಪಂದಿಸುತ್ತಿದ್ದ
ಬಿ.ಶಿವಲಿಂಗಪ್ಪನವರ ಸಾವು ನಮ್ಮನ್ನೆಲ್ಲಾ ಚಿಂತೆಗೀಡು ಮಾಡಿದೆ. ಆತನಲ್ಲಿದ್ದ ಅನ್ಯೋನ್ಯತೆಯ ಗುಣವನ್ನು ಸಹಿಸದವರಿಂದ ಈ ಕೃತ್ಯ ನಡೆದಿರಬಹುದೆಂಬ ಶಂಕೆಯಿದೆ. ಕೇವಲ ಮಡಿವಾಳ ಸಮಾಜಕ್ಕಷ್ಟೆ ಅಲ್ಲ. ಬೇರೆ ಎಲ್ಲಾ ಜಾತಿ ಧರ್ಮದವರೊಡನೆ ಸಹೋದರತ್ವವಿಟ್ಟುಕೊಂಡಿದ್ದರೆಂದು ಗುಣಗಾನ ಮಾಡಿದರು.
ಹತ್ಯೆಕೋರರನ್ನು ಶೀಘ್ರವೇ ಬಂಧಿಸಿ ದುಃಖತಪ್ತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಹೋರಾಟಕ್ಕೆ ಇಳಿಯಬೇಕಾಗುತ್ತದೆಂದು ಎಚ್ಚರಿಸಿದರು.
ಮಾದಿಗ ಸಾಂಸ್ಕೃತಿಕ ಸಂಘದ ಪ್ರಧಾನ ಕಾರ್ಯದರ್ಶಿ ಹಿರೇಹಳ್ಳಿ ಮಲ್ಲಿಕಾರ್ಜುನ್ ಮಾತನಾಡಿ ತಪ್ಪು ಮಾಡಿದವರಿಗೆ ಶಿಕ್ಷೆ ನೀಡಲು ಕಾನೂನಿದೆ. ಆದರೆ ಬಿ.ಶಿವಲಿಂಗಪ್ಪನವರ ಹತ್ಯೆಯಾಗಿರುವುದು ನಾಗರೀಕ ಸಮಾಜಕ್ಕೆ ಭಯ ಮೂಡಿಸಿದೆ. ಪೊಲೀಸರು ನಿಸ್ಪಕ್ಷಪಾತ ತನಿಖೆ ನಡೆಸಿ ಹತ್ಯೆಕೋರರನ್ನು ಬಂಧಿಸಿ ಉಗ್ರ ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿದರು.
ಮಡಿವಾಳ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಆರ್.ಮಂಜುನಾಥ್, ಮೊಳಕಾಲ್ಮುರು ತಾಲ್ಲೂಕು ಅಧ್ಯಕ್ಷ ವಿರುಪಾಕ್ಷಪ್ಪ, ಲೋಕೇಶ್ವರಪ್ಪ ಶ್ರೀರಾಂಪುರ, ಹೊಸದುರ್ಗ ತಾಲ್ಲೂಕು ಅಧ್ಯಕ್ಷ ರಾಮಕೃಷ್ಣ, ಹೊಳಲ್ಕೆರೆ ತಾಲ್ಲೂಕು ಅಧ್ಯಕ್ಷ ದ್ರುವಕುಮಾರ್, ಉಪಾಧ್ಯಕ್ಷ ಬಸವರಾಜ್, ಚಳ್ಳಕೆರೆ ತಾಲ್ಲೂಕು ಅಧ್ಯಕ್ಷ ನಾಗಣ್ಣ, ಮಂಜುನಾಥ್, ಟಿ.ರುದ್ರಮುನಿ, ರಮೇಶ್, ಮಹಿಳಾ ಘಟಕದ ಅಧ್ಯಕ್ಷೆ ರಂಗಮ್ಮ, ಪ್ರಕಾಶ್ ಎಸ್.ಜೆ.ಎಂ.ಐ.ಟಿ. ರಮೇಶ್ ಜಗಳೂರು, ಸಾಮಾಜಿಕ ಸಂಘರ್ಷ ಸಮಿತಿಯ ಟಿ.ರಾಮು, ರಾಮುಗೋಸಾಯಿ, ಸಿ.ಎ.ಚಿಕ್ಕಣ್ಣ, ಸುಧಾಕರ್ ಇನ್ನು ಅನೇಕರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
++++
ಮಡಿವಾಳರ ಸಂಘ, ಸಾಮಾಜಿಕ ಸಂಘರ್ಷ ಸಮಿತಿ ಪ್ರತಿಭಟನೆ
ಚಿತ್ರದುರ್ಗ : ಮಡಿವಾಳ ಸಮಾಜದ ಬಿ.ಶಿವಲಿಂಗಪ್ಪನವರನ್ನು ಭೀಕರವಾಗಿ ಹತ್ಯೆಗೈದಿರುವುದನ್ನು ಖಂಡಿಸಿ ಜಿಲ್ಲಾ ಮಡಿವಾಳರ ಸಂಘ ಹಾಗೂ ಸಾಮಾಜಿಕ ಸಂಘರ್ಷ ಸಮಿತಿಯಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಹೆಚ್ಚುವರಿ ರಕ್ಷಣಾಧಿಕಾರಿ ಡಾ.ಆರ್.ಶಿವಕುಮಾರ್ ಗೆ ಮನವಿ ಸಲ್ಲಿಸಲಾಯಿತು.
ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ರಕ್ಷಣಾಧಿಕಾರಿ ಕಚೇರಿಗೆ ತೆರಳಿದ ಪ್ರತಿಭಟನಾಕಾರರು ದಾರಿಯುದ್ದಕ್ಕೂ ಹತ್ಯೆಕೋರರ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಮಡಿವಾಳ ಜನಾಂಗಕ್ಕೆ ಸೇರಿದ ಬಿ.ಶಿವಲಿಂಗಪ್ಪನವರು ರಾಜಕಾರಣ ಹಾಗೂ ಉದ್ಯಮದಲ್ಲಿ ವೇಗವಾಗಿ ಬೆಳೆಯುತ್ತಿರುವುದನ್ನು ಕಂಡು ಸಹಿಸದವರಿಂದ ಹತ್ಯೆಯಾಗಿರಬಹುದೆಂಬ ಅನುಮಾನವಿದ್ದು, ತನಿಖೆ ನಡೆಸಿ ಶೀಘ್ರವೇ ಹಂತಕರನ್ನು ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಿದಾಗ ದುಃಖತಪ್ತ ಕುಟುಂಬಕ್ಕೆ ನ್ಯಾಯ ಒದಗಿಸಿದಂತಾಗುತ್ತದೆಂದು ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದ ಜಿಲ್ಲಾ ಮಡಿವಾಳರ ಸಂಘದ ಗೌರವಾಧ್ಯಕ್ಷ ಡಾ.ವಿ.ಬಸವರಾಜ್ ಹೆಚ್ಚುವರಿ ರಕ್ಷಣಾಧಿಕಾರಿಯವರನ್ನು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಹೆಚ್ಚುವರಿ ರಕ್ಷಣಾಧಿಕಾರಿ ಡಾ.ಆರ್.ಶಿವಕುಮಾರ್, ಮೃತದೇಹ ಪತ್ತೆಯಾದ ಜಾಗಕ್ಕೆ ಜಿಲ್ಲಾ ರಕ್ಷಣಾಧಿಕಾರಿ, ನಾನು ಮತ್ತು ಡಿವೈಎಸ್ಪಿ. ಭೇಟಿ ನೀಡಿದೇವೆ. ಹಂತಕರ ಪತ್ತೆಗೆ ತಂಡ ರಚಿಸಿದ್ದು, ಆದಷ್ಟು ಬೇಗನೆ ಹತ್ಯೆಕೋರರನ್ನು ಬಂಧಿಸಿ ಅವರ ಕುಟುಂಬಕ್ಕೆ ನ್ಯಾಯ ಒದಗಿಸುವ ಭರವಸೆ ನೀಡಿದರು.
