ಮೇ 1ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಹೋರಾಟ: ಭೂಹೀನರಿಗೆ ಭೂಮಿ, ಮನೆರಹಿತರಿಗೆ ವಸತಿ ಒತ್ತಾಯ
ಚಿತ್ರದುರ್ಗ: ಭೂಹೀನರಿಗೆ ಭೂಮಿ ಹಾಗೂ ವಸತಿ ರಹಿತರಿಗೆ ಮನೆಗಳನ್ನು ಒದಗಿಸಬೇಕೆಂಬ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸದಿದ್ದರೆ, ಮೇ 1ರಿಂದ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಅನಿರ್ದಿಷ್ಟಾವಧಿ ಹೋರಾಟ ಆರಂಭಿಸಲಾಗುವುದು ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ರಾಜ್ಯ ಖಜಾಂಚಿ ಶ್ರೀರಂಗಾಚಾರಿ ಎಚ್ಚರಿಕೆ ನೀಡಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರ ಆಶಯದಂತೆ ಸಮಿತಿ ಹಲವು ವರ್ಷಗಳಿಂದ ಭೂಹೀನರು ಮತ್ತು ವಸತಿ ರಹಿತರ ಪರ ನಿರಂತರ ಹೋರಾಟ ನಡೆಸುತ್ತಿದೆ ಎಂದು ತಿಳಿಸಿದರು.
ಅರಣ್ಯ, ಇನಾಂ, ಹುಲ್ಲುಬನ್ನಿ, ಗೋಮಾಳ ಹಾಗೂ ಸೇಂದಿವನ ಎಂಬ ವಿವಿಧ ವರ್ಗೀಕರಣಗಳಲ್ಲಿ ಲಕ್ಷಾಂತರ ಎಕರೆ ಭೂಮಿ ರಾಜ್ಯದಲ್ಲಿ ಲಭ್ಯವಿದ್ದರೂ, ಕಾನೂನು ಅಡ್ಡಿಗಳನ್ನು ಮುಂದಿಟ್ಟು ಬಡವರಿಗೆ ಜಮೀನು ನೀಡಲು ಸಾಧ್ಯವಿಲ್ಲ ಎಂದು ಹೇಳುವುದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು.
ಒನ್ ಟೈಂ ಸೆಟ್ಲಮೆಂಟ್ ಮೂಲಕ ಪ್ರತೀ ಬಡ ಕುಟುಂಬಕ್ಕೆ ತಲಾ ಎರಡು ಎಕರೆ ಜಮೀನು ನೀಡಬೇಕು. ವಸತಿ ಇಲ್ಲದವರಿಗೆ ಸರ್ಕಾರ ಮನೆಗಳನ್ನು ನಿರ್ಮಿಸಿ ಕೊಡಬೇಕು ಎಂದು ಅವರು ಒತ್ತಾಯಿಸಿದರು.
ಸರ್ಕಾರ ಬಡವರ ನಿರ್ಲಕ್ಷಿಸಿ ದೊಡ್ಡ ಉದ್ಯಮಿಗಳು ಮತ್ತು ಬಂಡವಾಳಶಾಹಿಗಳಿಗೆ ಭೂಮಿಯನ್ನು ನೀಡುತ್ತಿದೆ ಎಂದು ಆರೋಪಿಸಿದ ಅವರು, ಕೈಗಾರಿಕಾ ಸಂಸ್ಥೆಗಳಿಗೆ ನೂರಾರು ಎಕರೆ ಜಮೀನು ನೀಡುತ್ತಿರುವಾಗ ಬಡವರಿಗೆ ಜಮೀನು ನೀಡದಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಸರ್ಕಾರ ಬಡವರಿಂದ ಭೂಮಿ ಕಸಿದುಕೊಂಡು ಉದ್ಯಮಿಗಳು, ಬಂಡವಾಳಶಾಹಿಗಳಿಗೆ ಕೊಡುತ್ತಿದೆ. ಪ್ರಧಾನಿ ಮೋದಿರವರು 1050 ಎಕರೆ ಭೂಮಿಯನ್ನು ಕೇವಲ ಒಂದು ರೂ.ಗೆ ಎಕರೆಯಂತೆ ಅದಾನಿಗೆ ಕೊಟ್ಟಿದ್ದಾರೆ. ಇನ್ನು ರಾಜ್ಯ ಸರ್ಕಾರ ಎಂಟು ನೂರು ಎಕರೆ ಜಮೀನನ್ನು ಜಿಂದಾಲ್ ಕಂಪನಿಗೆ ಕೊಟ್ಟಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.?
ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಸತ್ಯಪ್ಪ ಮಲ್ಲಾಪುರ ಮಾತನಾಡಿ, ಹೆಚ್.ಎಸ್.ದೊರೆಸ್ವಾಮಿರವರ ಆಸೆಯಂತೆ ಮೇ.1 ರಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ನಡೆಸಿ ಬಡವರಿಗೆ ಭೂಮಿ ಮತ್ತು ಮನೆಗಳನ್ನು ಕೊಡಿಸೋಣ. ಎಲ್ಲರೂ ಹೋರಾಟದಲ್ಲಿ ಕೈಜೋಡಿಸುವಂತೆ ಮನವಿ ಮಾಡಿದರು.
ಸಮಿತಿಯ ಕಾರ್ಯದರ್ಶಿ ಹನುಮಂತಪ್ಪ ಗೋನೂರು ಮಾತನಾಡುತ್ತ ಬಡವರಿಗೆ ಭೂಮಿ ಮತ್ತು ವಸತಿರಹಿತರಿಗೆ ಮನೆಗಳನ್ನು ಸರ್ಕಾರದಿಂದ ಕೊಡಿಸಬೇಕೆಂಬುದು ನಮ್ಮ ಹೋರಾಟದ ಉದ್ದೇಶ. ಭೂಹೀನರಿಗೆ ಭೂಮಿ ಕೊಡಿಸಬೇಕೆಂಬ ಮಹದಾಸೆಯಿಟ್ಟುಕೊಂಡು ಎಚ್.ಎಸ್.ದೊರೆಸ್ವಾಮಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯನ್ನು ಹುಟ್ಟು ಹಾಕಿದರು. ನಾವುಗಳು ಮುನ್ನಡೆಸಿಕೊಂಡು ಹೋಗಬೇಕಿದೆ ಎಂದರು.
ಎದ್ದೇಳು ಕರ್ನಾಟಕ ಜಿಲ್ಲಾ ಮುಖಂಡ ಶಿವಕುಮಾರ್ ಮಾತನಾಡಿ ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳಲು ಬಡವರಿಗೆ ಭೂಮಿ ಮತ್ತು ಶಿಕ್ಷಣ ಕೊಡಿಸಬೇಕೆಂಬುದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪ್ರೊ.ಬಿ.ಕೃಷ್ಣಪ್ಪನವರ ಗುರಿಯಾಗಿತ್ತು. ಅದರಂತೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಕೂಡ ಬಡವರಿಗೆ ಭೂಮಿ ಕೊಡಿಸಲು ಸಾಕಷ್ಟು ಹೋರಾಟ, ಚಳುವಳಿಗಳಲ್ಲಿ ತೊಡಗಿಕೊಂಡಿದ್ದರು. ಬಹುತೇಕ ಸಂಘಟನೆಗಳಲ್ಲಿ ಸೈದ್ದಾಂತಿಕ ಭಿನ್ನಾಭಿಪ್ರಾಯಗಳಿರುವುದರಿಂದ ಆಳುವ ಸರ್ಕಾರಗಳು ಬಡವರನ್ನು ನಿರ್ಲಕ್ಷಿಸತ್ತಿವೆ. ಫಲ ಪಡೆಯಬೇಕಾದವರು ಹೋರಾಟಕ್ಕೆ ಬರದಿದ್ದರೆ ನಾಯಕತ್ವ ವಹಿಸಿಕೊಂಡವರಿಗೆ ಕಷ್ಟವಾಗುತ್ತದೆಂದು ತಿಳಿಸಿದರು.
ರಾಜಣ್ಣ ಲಕ್ಷ್ಮಿಸಾಗರ ಮಾತನಾಡಿ, ರಾಜಕಾರಣಿಗಳಿಗೆ ಇಚ್ಚಾಶಕ್ತಿ ಕೊರತೆಯಿರುವುದರಿಂದ ಭೂಹೀನರಿಗೆ ಜಮೀನು ಸಿಗುತ್ತಿಲ್ಲ. ಹೋರಾಟದಲ್ಲಿ ಒಡಕುಂಟಾಗಬಾರದು. ಎಲ್ಲಾ ಸಂಘಟನೆಗಳು ಒಂದಾಗಿ ಚಳುವಳಿ ನಡೆಸಿದಾಗ ಮಾತ್ರ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಬಹುದೆಂದು ಹೇಳಿದರು.
ಈಚಘಟ್ಟದ ಕರಿಯಪ್ಪ ಮಾತನಾಡಿ ಸರ್ಕಾರಿ ಗೋಮಾಳದಲ್ಲಿ ಬಡವರು ಉಳುಮೆ ಮಾಡುತ್ತಿದ್ದಾರೆ. ಅಂತಹದರಲ್ಲಿ 52 ಎಕರೆ ಜಮೀನನ್ನು ಸರ್ಕಾರ ಸೋಲಾರ್ ವಿದ್ಯುತ್ಗೆ ನೀಡಿದೆ. ಆಗ ಜಿಲ್ಲಾಡಳಿತದ ವಿರುದ್ದ 2024 ರಲ್ಲಿ ಹೋರಾಟ ನಡೆಸಿದರು ಪ್ರಯೋಜನವಾಗಿಲ್ಲ. ಕೆಲವು ಸಂಘಟನೆಗಳು ಕಾರ್ಪೊರೇಟ್ ಕಂಪನಿಗಳ ಪರವಾಗಿರುವುದು ನಿಜವಾದ ಬಡವರಿಗೆ ಅನ್ಯಾಯವಾಗುತ್ತಿದೆ ಎಂದರು.
ಹೆಚ್.ವೆಂಕಟೇಶ್, ಅಂಜಿನಪ್ಪ, ಸಣ್ಣವೀರಪ್ಪ ಇನ್ನು ಅನೇಕರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
