ಚಿತ್ರದುರ್ಗ. ಪತಿ-ಪತ್ನಿ ಜಗಳ ಬಿಡಿಸಲು ಹೋಗಿ ಪ್ರಾಣ ಕಳೆದುಕೊಂಡ ವ್ಯಕ್ತಿ
ಚಿತ್ರದುರ್ಗ:
ನಗರದ ಬುದ್ಧ ವೃತ್ತದ ಬಳಿ ವ್ಯಕ್ತಿಯೊಬ್ಬರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ಸಂಭವಿಸಿದೆ. ಕೌಟುಂಬಿಕ ಕಲಹದ ಹಿನ್ನೆಲೆ ಈ ದಾಳಿ ನಡೆದಿರುವುದು ತಿಳಿದುಬಂದಿದೆ.
ಗಾಯಾಳುವಾದ ತಾಜ್ ಪೀರ್ (42) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ದಾವಣಗೆರೆಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಘಟನೆ ಚಿತ್ರದುರ್ಗದ ಸ್ಟೇಡಿಯಂ ರಸ್ತೆಯಲ್ಲಿರುವ ಬುದ್ಧ ವೃತ್ತದ ಬಳಿ ನಡೆದಿದೆ. ಸಾದಿಕ್ ವುಲ್ಲಾ ಎಂಬಾತ ಮಚ್ಚಿನಿಂದ ಹಲ್ಲೆ ನಡೆಸಿದ ಆರೋಪಿ. ಪತಿ-ಪತ್ನಿಯ ಜಗಳವನ್ನು ಬಿಡಿಸಲು ಬಂದಿದ್ದ ತಾಜ್ ಪೀರ್ ಮೇಲೆ ಏಕಾಏಕಿ ಸಾದಿಕ್ ವುಲ್ಲಾ ಮಚ್ಚಿನಿಂದ ದಾಳಿ ನಡೆಸಿದ್ದಾನೆ ಎಂದು ತಿಳಿದುಬಂದಿದೆ.
ಗಲಾಟೆಯನ್ನು ಬಿಡಿಸಲು ಬಂದ ಜನರ ಮೇಲೂ ಮಚ್ಚಿನಿಂದ ಹಲ್ಲೆ ಮಾಡಲು ಆರೋಪಿ ಯತ್ನಿಸಿದ್ದಾನೆ. ಬಳಿಕ ಗಾಯಾಳುವನ್ನು ಎಳೆದುಕೊಂಡು ಹೋಗಿ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಈ ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಪ್ರಕರಣ ಸಂಬಂಧ ಆರೋಪಿ ಸಾದಿಕ್ ವುಲ್ಲಾವನ್ನು ಬಡಾವಣೆ ಪೊಲೀಸ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನಾ ಸ್ಥಳಕ್ಕೆ ಎಸ್ಪಿ ರಂಜಿತ್ ಕುಮಾರ್ ಬಂಡಾರು ಮತ್ತು ಎಎಸ್ಪಿ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
