ಇನ್ನೂ ಬಾರದ ಬೆಳೆ ವಿಮೆ ; ಸಂಕಷ್ಟದಲ್ಲಿ ಅನ್ನದಾತ
ಚಳ್ಳಕೆರೆ: ತಾಲ್ಲೂಕಿನ ಸಾವಿರಾರು ಶೇಂಗಾ ಬೆಳೆಗಾರರಿಗೆ ಇನ್ನೂ ಬೆಳೆ ವಿಮೆ ಪರಿಹಾರ ಹಣ ದೊರೆಯದೇ ಸಂಕಷ್ಟ ಮುಂದುವರಿದಿರುವ ಹಿನ್ನೆಲೆಯಲ್ಲಿ, ತಕ್ಷಣ ವಿಮೆ ಹಣ ಮಂಜೂರು ಮಾಡಿಸಬೇಕೆಂದು ರೈತರು ಶಾಸಕ ಟಿ. ರಘುಮೂರ್ತಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.
2025-26ನೇ ಸಾಲಿನಲ್ಲಿ ಖಾಸಗಿ ಬೆಳೆ ವಿಮೆ ಕಂಪನಿಯಿಂದ ತಾಲ್ಲೂಕಿನ ಸುಮಾರು 36,766 ರೈತರು ಒಟ್ಟು 1,14,900 ಎಕರೆ ಪ್ರದೇಶಕ್ಕೆ ಬೆಳೆ ವಿಮೆ ಮಾಡಿಸಿದ್ದರೂ, ಕಂಪನಿಯ ನಿರ್ಲಕ್ಷ್ಯದಿಂದ ಪರಿಹಾರ ಹಣ ಬಿಡುಗಡೆಯಾಗಿಲ್ಲ ಎಂದು ರೈತರು ದೂರಿದ್ದಾರೆ. ಈ ಕುರಿತು ಕೃಷಿ ಆಯುಕ್ತರಿಗೆ ಶಿಫಾರಸು ಮಾಡಿ ತಕ್ಷಣ ಪರಿಹಾರ ನೀಡಿಸಬೇಕೆಂದು ತಾಲ್ಲೂಕು ಕಸಬಾ ಹೋಬಳಿ ಶೇಂಗಾ ಮತ್ತು ತೊಗರಿ ಬೆಳೆಗಾರರ ಸಂಘ ಮನವಿ ಸಲ್ಲಿಸಿದೆ.
ಸಂಘದ ಅಧ್ಯಕ್ಷರು ಹಾಗೂ ನಿವೃತ್ತ ಪ್ರಾಂಶುಪಾಲ ಪ್ರೊ.ಸಿ.ಶಿವಲಿಂಗಪ್ಪ ಮಾತನಾಡಿ, ಕಳೆದ ವರ್ಷವೂ ಖಾಸಗಿ ಬೆಳೆ ವಿಮಾ ಕಂಪನಿಯ ನಿರ್ಲಕ್ಷ್ಯದಿಂದ ತಾಲ್ಲೂಕಿನ ಸಾವಿರಾರು ತೊಗರಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದರು ಎಂದು ಹೇಳಿದರು. ನಿರಂತರ ಹೋರಾಟ ಹಾಗೂ ಶಾಸಕ ಟಿ. ರಘುಮೂರ್ತಿಯವರ ಪರಿಶ್ರಮದಿಂದ ಆಗ ಸುಮಾರು 3,580 ರೈತರಿಗೆ ₹3.52 ಕೋಟಿ ಪರಿಹಾರ ದೊರೆತಿತ್ತು ಎಂದು ಅವರು ನೆನಪಿಸಿದರು.
ಪ್ರಸ್ತುತ ಲಕ್ಷಾಂತರ ಶೇಂಗಾ ಬೆಳೆಗಾರರು ವಿಮೆ ಮಾಡಿಸಿಕೊಂಡಿದ್ದರೂ ಪರಿಹಾರ ಹಣ ನೀಡುವಲ್ಲಿ ಖಾಸಗಿ ಕಂಪನಿಗಳು ನಿರ್ಲಕ್ಷ್ಯ ತಾಳಿರುವುದಕ್ಕೆ ಕ್ರಮ ಕೈಗೊಳ್ಳಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಮನವಿ ಸ್ವೀಕರಿಸಿದ ಶಾಸಕ ಟಿ. ರಘುಮೂರ್ತಿ, ಕೃಷಿ ಇಲಾಖೆ ಆಯುಕ್ತರಿಗೆ ಪತ್ರ ಬರೆದು ತಾಲ್ಲೂಕಿನ ಶೇಂಗಾ ಬೆಳೆಗಾರರ ವಿಮೆ ಪಾವತಿಯಲ್ಲಿ ನಿರ್ಲಕ್ಷ್ಯ ವಹಿಸಿದ ಖಾಸಗಿ ಬೆಳೆ ವಿಮಾ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಜೊತೆಗೆ, ತಕ್ಷಣ ಪರಿಹಾರ ಹಣ ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿದ್ದಾರೆ.
ಪ್ರಗತಿಪರ ರೈತ ಡಾ.ಆರ್.ಎ.ದಯಾನಂದಮೂರ್ತಿ, ಎಲ್ಐಸಿ ತಿಪ್ಪೇಸ್ವಾಮಿ, ವೀರಣ್ಣ, ಸಿದ್ದೇಶ್ವರರೆಡ್ಡಿ, ಜಿ. ಎಸ್. ನಾಗರಾಜು, ಶರಣಪ್ಪ, ಭರತೇಶ್ ರೆಡ್ಡಿ, ತಮ್ಮೇಗೌಡ, ಪ್ರಕಾಶ್, ಜಿ. ಎಂ. ಶಶಿಧರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
