ಪಿಯು ಫಲಿತಾಂಶಕ್ಕೂ ಮುನ್ನ ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್: ಇನ್ನೂ ‘ಫೇಲ್’ ಅನ್ನೋ ಮಾತಿಲ್ಲ !
ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶದ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಲಕ್ಷಾಂತರ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಫೇಲ್ ಆದರೆ? ಎಂಬ ಆತಂಕ ಮನೆ ಮಾಡಿರುವುದು ಸಹಜ. ಆದರೆ ಈ ಬಾರಿ ವಿದ್ಯಾರ್ಥಿಗಳಿಗೆ ದೊಡ್ಡ ಮಟ್ಟದ ನೆಮ್ಮದಿ ನೀಡುವ ಸುದ್ದಿಯೊಂದು ಹೊರಬಿದ್ದಿದೆ. ಕರ್ನಾಟಕ ಶಿಕ್ಷಣ ಮಂಡಳಿ ಜಾರಿಗೆ ತಂದಿರುವ ವಿದ್ಯಾರ್ಥಿ ಸ್ನೇಹಿ ಉತ್ತೀರ್ಣ ನಿಯಮಗಳಿಂದ ಈ ಬಾರಿ ‘ಫೇಲ್’ ಎನ್ನುವ ಭಯ ಬಹುತೇಕ ಕಡಿಮೆಯಾಗುವ ಸಾಧ್ಯತೆ ಇದೆ.
ಮಂಡಳಿಯ ಹೊಸ ನಿಯಮ ಪ್ರಕಾರ, ಪ್ರತಿ ವಿಷಯದಲ್ಲಿ ಉತ್ತೀರ್ಣರಾಗಲು ಕೇವಲ 30 ಅಂಕಗಳು ಸಾಕಾಗುತ್ತವೆ. ವಿಶೇಷವೆಂದರೆ ಈ 30 ಅಂಕಗಳಲ್ಲಿ ಥಿಯರಿ ಪರೀಕ್ಷೆಯ ಅಂಕಗಳ ಜೊತೆಗೆ ಕಾಲೇಜು ನೀಡುವ 20 ಅಂಕಗಳ ಆಂತರಿಕ ಮೌಲ್ಯಮಾಪನ ಕೂಡ ಸೇರಿರುತ್ತದೆ.
ಅಂದರೆ, ವಿದ್ಯಾರ್ಥಿಗೆ ಕಾಲೇಜಿನಿಂದ ಉತ್ತಮ ಆಂತರಿಕ ಅಂಕಗಳು ದೊರೆತಿದ್ದರೆ, ಥಿಯರಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೂ ಪಾಸ್ ಆಗುವ ಅವಕಾಶ ಹೆಚ್ಚುತ್ತದೆ. ಇದೇ ಕಾರಣದಿಂದ ಈ ಬಾರಿ ಸಾವಿರಾರು ವಿದ್ಯಾರ್ಥಿಗಳಿಗೆ ಫಲಿತಾಂಶದ ವೇಳೆ ದೊಡ್ಡ ಮಟ್ಟದ ನೆರವಾಗುವ ನಿರೀಕ್ಷೆ ಇದೆ.
ಒಟ್ಟು 600 ಅಂಕಗಳಲ್ಲಿ 198 ಅಂಕಗಳು (33%) ಗಳಿಸಿದರೆ ವಿದ್ಯಾರ್ಥಿ ಉತ್ತೀರ್ಣನಾಗಬಹುದು ಎಂಬ ನಿಯಮ ವಿದ್ಯಾರ್ಥಿಗಳ ಪಾಲಿಗೆ ದೊಡ್ಡ ಭರವಸೆಯಾಗಿದೆ. ಕಳೆದ ವರ್ಷಗಳಲ್ಲಿ ಕೆಲವೇ ಅಂಕಗಳ ಅಂತರದಿಂದ ಅನುತ್ತೀರ್ಣರಾಗುತ್ತಿದ್ದ ವಿದ್ಯಾರ್ಥಿಗಳಿಗೆ ಈ ಬಾರಿ ಮಂಡಳಿಯ ಈ ಕ್ರಮ ಸಂಜೀವಿನಿಯಾಗಲಿದೆ ಎಂದು ಶಿಕ್ಷಣ ವಲಯದಲ್ಲಿ ಚರ್ಚೆಯಾಗುತ್ತಿದೆ.
ಈ ಕ್ರಮದ ಹಿಂದೆ ಸರ್ಕಾರದ ಮುಖ್ಯ ಉದ್ದೇಶ ವಿದ್ಯಾರ್ಥಿಗಳನ್ನು ಕೇವಲ ಪಾಸ್ ಮಾಡಿಸುವುದಲ್ಲ, ಬದಲಾಗಿ ಅವರು ಹೆಚ್ಚಿನ ಸಂಖ್ಯೆಯಲ್ಲಿ ಪದವಿ ಶಿಕ್ಷಣಕ್ಕೆ ಸೇರುವಂತೆ ಪ್ರೋತ್ಸಾಹಿಸುವುದಾಗಿದೆ. ನೆರೆಯ ರಾಜ್ಯಗಳೊಂದಿಗೆ ಹೋಲಿಸಿದರೆ ಕರ್ನಾಟಕದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದತ್ತ ಹೆಚ್ಚಿನ ಸಂಖ್ಯೆಯಲ್ಲಿ ಸಾಗಬೇಕು ಎಂಬ ಆಶಯದಿಂದ ಈ ರಿಯಾಯಿತಿ ನೀಡಲಾಗಿದೆ.
ಹೀಗಾಗಿ ವಿದ್ಯಾರ್ಥಿಗಳು ಫಲಿತಾಂಶದ ಬಗ್ಗೆ ಅನಗತ್ಯ ಆತಂಕಕ್ಕೆ ಒಳಗಾಗದೆ ಆತ್ಮವಿಶ್ವಾಸದಿಂದ ಎದುರುನೋಡಬಹುದು. ಮಂಡಳಿಯ ಹೊಸ ನಿಯಮ ಈ ಬಾರಿ ಅನೇಕ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ‘PASS’ ಎಂಬ ಪದವನ್ನು ರಾರಾಜಿಸುವಂತೆ ಮಾಡುವ ಸಾಧ್ಯತೆ ಹೆಚ್ಚಿದೆ.
