ಬೆಂಗಳೂರು: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತಗಳ್ಳತನ ಆರೋಪ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬುಡಕ್ಕೆ ಬಂದಿದೆ. ಹೌದು…2018ರ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಲ್ಲಿ ಮತ ಖರೀದಿ ಮಾಡಿದ್ದರಿಂದ ಸಿದ್ದರಾಮಯ್ಯನವರು ಗೆದ್ದದ್ದು ಎಂದು ಸಿ.ಎಂ. ಇಬ್ರಾಹಿಂ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇದೇ ಹೇಳಿಕೆಯನ್ನು ಆಧರಿಸಿ ರಾಜ್ಯ ಬಿಜೆಪಿ, ರಾಜ್ಯ ಚುನಾವವಣಾ ಆಯೋಗಕ್ಕೆದೂರು ನೀಡಿದೆ.2018ರ ವಿಧಾನಸಭಾ ಚುನಾವಣೆಯಲ್ಲಿ ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ 3000 ಮತ ಖರೀದಿ ಕುರಿತು ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಹೇಳಿಕೆ ಮತ್ತು 2024ರ ಲೋಕಸಭಾ ಚುನಾವಣೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದಲ್ಲಿ 7 ಕೋಟಿ ರೂ. ಹಂಚಿಕೆ ಕುರಿತು ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿಕೆಯನ್ನು ಆಧರಿಸಿ ಬಿಜೆಪಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದೆ.ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವಥ್ ನಾರಾಯಣ, ಮಾಜಿ ಎಂಎಲ್ಸಿಗಳಾದ ಕ್ಯಾ. ಗಣೇಶ್ ಕಾರ್ಣಿಕ್, ಅರುಣ್ ಶಹಾಪುರ ಮತ್ತು ಬಿಜೆಪಿ ಕಾನೂನು ಪ್ರಕೋಷ್ಠ ಸಂಚಾಲಕ ವಸಂತಕುಮಾರ್ ಅವರನ್ನೊಳಗೊಂಡ ಬಿಜೆಪಿ ತಂಡ, ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಇಬ್ರಾಹಿಂ ಮತ್ತು ಶಿವಲಿಂಗೇಗೌಡ ಹೇಳಿಕೆಗಳ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದೆ.
ಕೇಂದ್ರ ಚುನಾವಣೆ ಆಯೋಗಕ್ಕೂ ಪತ್ರ
ರಾಹುಲ್ ಗಾಂಧಿ ಮತಗಳ್ಳತನದ ಆರೋಪ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಬೆಂಗಳೂರಿನಲ್ಲಿ ಪ್ರತಿಭಟನಾ ಸಮಾವೇಶ ನಡೆಸಿ ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನವಾಗಿದೆ ಎಂದು ಕೆಲ ಅಂಕಿ-ಸಂಖ್ಯೆ ಬಿಡುಗಡೆಗೊಳಿಸಿದ್ದರು. ಇದರ ಬೆನ್ನಲ್ಲೇ ಸಿದ್ದರಾಮಯ್ಯನವರ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ಸಿ.ಎಂ. ಇಬ್ರಾಹಿಂ, ಸಿದ್ದರಾಮಯ್ಯ ವಿರುದ್ಧ ಮತ ಖರೀದಿ ಆರೋಪ ಮಾಡಿದ್ದರು. ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡ ಬಿಜೆಪಿ, ಸಿದ್ದರಾಮಯ್ಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ. ಈ ಸಂಬಂಧ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಹ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ಸಿ.ಎಂ.ಇಬ್ರಾಹಿಂ (CM Ibrahim) ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಕ್ರಮಕ್ಕೆ ಮನವಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಇಬ್ರಾಹಿಂ ಹೇಳಿದ್ದೇನು?
“2018ರ ಅಸೆಂಬ್ಲಿ ಚುನಾವಣೆಯಲ್ಲಿ ಏನಾಗಿತ್ತು ಗೊತ್ತಾ? ಚಾಮುಂಡೇಶ್ವರಿಯಲ್ಲಿನ ಗ್ರೌಂಡ್ ರಿಪೋರ್ಟ್ ಸರಿಯಿರಲಿಲ್ಲ, ಅದಕ್ಕಾಗಿ ಬಾದಾಮಿಯಲ್ಲೂ ಸಿದ್ದರಾಮಯ್ಯ ಕಣಕ್ಕಿಳಿದಿದ್ದರು. ಎರಡು ಕಡೆ ಸ್ಪರ್ಧಿಸಿದ್ದರು. ಬಾದಾಮಿಯಲ್ಲಿ, ಮೂರು ಸಾವಿರ ಮತವನ್ನು ಖರೀದಿಸದಿದ್ದರೆ ಅಲ್ಲೂ ಸೋಲುತ್ತಿದ್ದರು” ಎಂದು ಸಿಎಂ ಇಬ್ರಾಹಿಂ ಹೇಳಿದ್ದರು.ಬಾದಾಮಿಯಲ್ಲಿ ನಾನು ಬುದ್ದಿವಂತಿಕೆಯಿಂದ ಕೆಲಸ ಮಾಡಿದೆ. ಅಲ್ಲಿನ ಪರಿಸ್ಥಿತಿಯೂ ಸಿದ್ದರಾಮಯ್ಯನವರಿಗೆ ಪೂರಕವಾಗಿರಲಿಲ್ಲ. ನಾನು ಬೇರೆ ಕಡೆ ಸಾಲ ಮಾಡಿ ಮೂರು ಸಾವಿರ ಮತಗಳನ್ನು ಖರೀದಿ ಮಾಡಿದ್ದೆ. ಆ ಕಾರಣಕ್ಕಾಗಿ, ಅವರು ಅಲ್ಪಮತದಲ್ಲಿ ಗೆಲುವು ಸಾಧಿಸಿದರು. ಆರು ತಿಂಗಳ ನಂತರ, ಸಿದ್ದರಾಮಯ್ಯ ನಾನು ಖರ್ಚು ಮಾಡಿದ್ದ ದುಡ್ಡನ್ನು ವಾಪಸ್ ಕೊಟ್ಟರು ಎಂದು ಎಂದಿದ್ದಾರೆ.ನಾನು ಹೇಳುತ್ತಿರುವುದು ನಿಜ, ನಾನು ಎಲ್ಲಿ ಬೇಕಾದರೂ ಪ್ರಮಾಣ ಮಾಡುತ್ತೇನೆ. ಆದರೆ, ಮೇಲ್ಮನೆಯಲ್ಲಿ ನನ್ನನ್ನು ಗೌರವದಿಂದ ಕಾಣಲಿಲ್ಲ, ಆ ಕಾರಣಕ್ಕಾಗಿ ರಾಜೀನಾಮೆ ನೀಡಿದೆ ಎಂದು ಇಬ್ರಾಹಿಂ ಹೇಳಿದ್ದಾರೆ. ಆ ಮೂಲಕ, ಮತದಾರರಿಗೆ ದುಡ್ಡು ಕೊಟ್ಟು ಮತ ಚಲಾಯಿಸಿಕೊಂಡಿದ್ದನ್ನು ಪರೋಕ್ಷವಾಗಿ ಹೇಳಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







