ಕಗ್ಗಂಟು ಬಿಡಿಸಿದ ‘ಸುರ್ಜೇವಾಲಾ’; ಟಿಕೆಟ್ ಘೋಷಣೆಗೆ ಕೌಂಟ್ಡೌನ್
ಬೆಂಗಳೂರು: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಅಂದುಕೊಂಡಂತೆ ನಡೆಯದ ಕಾರಣ ಕಗ್ಗಂಟ್ಟಾಗಿ ಪರಿಣಮಿಸಿತ್ತು. ಸರತಿ ಸಭೆ ನಡೆಸಿದ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಕೊನೆಗೂ ಎಲ್ಲ ಗೊಂದಲ, ಅಸಮಾಧಾನಕ್ಕೆ ತೆರೆ ಎಳೆದು ಇದೀಗ ಕಗ್ಗಂಟು ಬಿಡಿಸಿದ್ದು, ಟಿಕೆಟ್ ಘೋಷಣೆಗೆ ಕೌಂಟ್ ಡೌನ್ ಶುರುವಾಗಿದೆ ಎಂದಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಮಾತನಾಡಿದ ಅವರು, ಟಿಕೆಟ್ ವಿಚಾರವಾಗಿ ವ್ಯಾಪಕವಾಗಿ ಚರ್ಚೆ ಮಾಡಲಾಗಿದೆ. ಯಾವುದೇ ಒಬ್ಬ ಕಾರ್ಯಕರ್ತರ ಅಪಸ್ವರ ಇದ್ದರೂ ಕೂಡ ಪರಿಗಣನೆಗೆ ತೆಗೆದುಕೊಂಡಿದ್ದೇವೆ. ಶುಕ್ರವಾರ ತಡರಾತ್ರಿಯವರೆಗೆ ಟಿಕೆಟ್ ವಿಚಾರವಾಗಿ ಚರ್ಚೆ ಮಾಡಿದ್ದೇವೆ. ಎಲ್ಲರ ಅಭಿಪ್ರಾಯಗಳನ್ನ ಕೇಳಿದ್ದೇವೆ. ಅಂತಿಮವಾಗೊ ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಒಳಗೆ ಟಿಕೆಟ್ ಘೋಷಣೆ ಮಾಡುತ್ತೇವೆ ಎಂದು ತಿಳಿಸಿದರು.
ಆಕಾಂಕ್ಷಿಗಳು ಸಿಎಂ, ಡಿಸಿಎಂ, ಸುರ್ಜೇವಾಲಾ, ಖರ್ಗೆ ಭೇಟಿ ಆಗಿ ಮಾತನಾಡಿದ್ದಾರೆ. ನಮ್ಮ ವೀಕ್ಷಕರು ಹೋಗಿ ಸರ್ವೇ ಮಾಡಿದ್ದಾರೆ. ಎಲ್ಲರೂ ಉಸ್ತುವಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ಅವರು ಹೈಕಮಾಂಡ್ಗೆ ವರದಿ ಸಲ್ಲಿಸಿರಬಹುದು. ಎರಡೂ ಕಡೆ ನಾವು ಗೆಲ್ಲಬೇಕು, ಅಂತಾ ಅಭ್ಯರ್ಥಿಯನ್ನೇ ಆಯ್ಕೆ ಮಾಡಬೇಕು ಎಂದು ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಹೇಳಿದರು.
ರಾಜ್ಯದಲ್ಲಿ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರಗಳ ಉಪಚುನಾವಣೆಗೆ ಮಾ.16ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಮಾ.23ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಮಾ. 24ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದ್ದು, ಮಾ.26ಕ್ಕೆ ಉಮೇದುವಾರಿಕೆ ವಾಪಸ್ ಪಡೆಯಲು ಕಡೆಯ ದಿನವಾಗಿದೆ.
