ಗೈರಾದ ಸಚಿವರಿಗೆ ಛೀಮಾರಿ ಹಾಕಿ, ಮನೆಗೆ ಕಳುಹಿಸಿ: ವಿಪಕ್ಷಗಳ ಆಗ್ರಹ
ವಿಧಾನಸಭೆ: ನಿಗದಿತ ಸಚಿವರು ಕಲಾಪಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಗೈರಾದ ಸಚಿವರಿಗೆ ಛೀಮಾರಿ ಹಾಕಿ ಮನೆಗೆ ಕಳುಹಿಸುವಂತೆ ವಿರೋಧ ಪಕ್ಷದ ಶಾಸಕರು ಸ್ಪೀಕರ್ ಯು.ಟಿ. ಖಾದರ್ ಅವರಲ್ಲಿ ಆಗ್ರಹಿಸಿದ ಪ್ರಸಂಗ ಮಂಗಳವಾರ ನಡೆಯಿತು. ವಿರೋಧ ಪಕ್ಷಗಳ ಆಕ್ರೋಶದ ಹಿನ್ನೆಲೆಯಲ್ಲಿ ಕಲಾಪಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಿ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲ ಸಚಿವರಿಗೂ ಕಳೆದ ವಾರ ಪತ್ರ ಬರೆದಿದ್ದರು. ಆದರೆ, ಬಹುತೇಕ ಸಚಿವರು ರಾಜಭವನ ಚಲೋದಲ್ಲಿ ಪಾಲ್ಗೊಂಡ ಕಾರಣ ಕಲಾಪಕ್ಕೆ ಗೈರಾಗಿದ್ದರು. ಇದರಿಂದ ಸಿಟ್ಟಾದ ವಿರೋಧ ಪಕ್ಷದ ಶಾಸಕರು, ಯಾರೆಲ್ಲ ಸಚಿವರು ಸದನದಲ್ಲಿ ಹಾಜರಿರಬೇಕು ಎಂಬುದನ್ನು ಘೋಷಿಸುವಂತೆ ಸ್ಪೀಕರ್ ಯು.ಟಿ. ಖಾದರ್ ಅವರಲ್ಲಿ ಪಟ್ಟು ಹಿಡಿದರು. ಸ್ಪೀಕರ್ ಯು.ಟಿ. ಖಾದರ್ ಸಚಿವರ ಹೆಸರು ಹೇಳುತ್ತಿದ್ದಂತೆ, ವಿರೋಧ ಪಕ್ಷದ ಶಾಸಕರು ‘ಹಾಜರಿಲ್ಲ, ಹಾಜರಿಲ್ಲ’ ಎಂದು ಜೋರಾಗಿ ಕೂಗುತ್ತಾ ಗದ್ದಲ ಎಬ್ಬಿಸಿದರು
