ವಿಶ್ವಬಂಧು ಮರುಳಸಿದ್ಧರ ವೈಭವದ ರಥೋತ್ಸವ ; ಸಜ್ಜಾದ ಆನಗೋಡು
ದಾವಣಗೆರೆ: 12 ನೇ ಶತಮಾನದ ಬಸವಾದಿ ಶಿವ ಶರಣರ ಹಿರಿಯ ಸಮಕಾಲೀನರಾದ ಶ್ರೀ ವಿಶ್ವಬಂಧು ಮರುಳಸಿದ್ದರು ಅಂದಿನ ಜಾತಿ ಪದ್ಧತಿ, ಮೂಢನಂಬಿಕೆ, ಪುರೋಹಿತಶಾಹಿ ವಿರುದ್ಧ ಹೋರಾಡಿದ ಮಹಾತಪಸ್ವಿ ಹಾಗು ಪವಾಡ ವಿರೋಧಿ ಪವಾಡ ಪುರುಷರು.
ಸಮತೆಯ ತತ್ವದ ಸಮಾನತೆಯ ಸಂಕೇತದ ಮೊದಲ ಹೆಜ್ಜೆಯ ಪ್ರತೀಕದ ಮರುಳಸಿದ್ದರು ಕೊಲ್ಲಾಪುರದ. ಮಹಾಲಕ್ಷ್ಮಿಯು(ಮಾಯೆ) ಶಿವ ಭಕ್ತರ ವಿರೋಧಿ ನೀತಿಯನ್ನು ಯುಕ್ತಿಯಿಂದ ಜಯಿಸಿ ಲಿಂಗ ದೀಕ್ಷೆ ಕರುಣಿಸಿದ ಮಹಾಮಹೀಮರು ತನ್ನ ನಂತರ ಸಮಾಜದ ಶ್ರೇಯೋಭಿವೃದ್ದಿಯ ದಿವ್ಯ ಕನಸು ಕಂಡು ಇಂದಿನ ಬಳ್ಳಾರಿ ಜಿಲ್ಲೆ,ಕೂಡ್ಲಿಗಿ ತಾಲ್ಲೂಕಿನ, ಉಜ್ಜಯಿನಿ ಅಂದಿನ ಕಗ್ಗಲ್ಲುಪುರದ ಪೂರ್ವಾಶ್ರಮದ ಸಾಕುತಂದೆ ಬಾಚಣ್ಣನ ಗೌಡ ನಿಂದ ಒಂಭತ್ತು ಪಾದದ ಭೂಮಿಯನ್ನು ಪಡೆದು ಮಾಘ ಶುದ್ಧ ಪೌರ್ಣಿಮೆಯ ಅಮೃತ ಗಳಿಗೆಯಲ್ಲಿ ಶ್ರೀ ಮದುಜ್ಜಯನಿ ಸದ್ದರ್ಮ ಸಿಂಹಾಸನಾ ಪೀಠ ಸ್ಥಾಪಿಸಿ ಶ್ರೀ ಪೀಠದ ಮೇಲೆ ತೆಲುಗಬಾಳಿನ ಮೂಕಸಿದ್ದರನ ಮಾತನಾಡುವ ಸಿದ್ದರನ್ನಾಗಿಸಿ ತಮ್ಮ ಸರ್ವಶಕ್ತಿಯನ್ನು ಧಾರೆಯನ್ನು ತರಳಾ ಬಾಳು ಎಂದು ಆಶೀರ್ವದಿಸುವ ಮೂಲಕ ತರಳಬಾಳು ಗುರು ಪರಂಪರೆಯ ಮೂಲ ಪುರುಷರಾಗಿದ್ದಾರೆ. ಈ ಪರಂಪರೆಯಲ್ಲಿ ಸಾಗಿಬಂದ ಗುರುವರ್ಯರು ತರಳಬಾಳು ಜಗದ್ಗುರುಗಳೆಂದು ವಿಶ್ವ ಪ್ರಸಿದ್ದಿಯಾಗಿದ್ದಾರೆ.
ಈ ತರಳಬಾಳು ಪಂಚಾಕ್ಷರಿ ಮಂತ್ರದಲ್ಲಿ ಸಂಪೂರ್ಣ ಮನುಕುಲದ ಅಭ್ಯುಧಯವೇ ಕೇಂದ್ರಿಕೃತವಾಗಿದೆ. ಕಾಲನುಕಾಲ ನಂತರದ ಕುಹಕಿಗಳ ವರ್ತನೆಗೆ ಛೀ ಎಂದು ಶ್ರೀ ತರಳಬಾಳು ಜಗದ್ಗುರು ಸದ್ದರ್ಮ ಸಿಂಹಾಸನಾ ಪರಂಪರೆಯ ದಿವ್ಯಕೇಂದ್ರ ಸಿರಿಗೆರೆಯನ್ನು ಕಾರ್ಯಕ್ಷೇತ್ರವನ್ನಾಗಿಸಿಕೊಂಡರು.
ಈ ಪರಂಪರೆಯ ಜ್ಞಾನ ಜ್ಯೋತಿ ದೇಶ ವಿದೇಶಗಳಲ್ಲಿ ಧೇದೀಪ್ಯಮಾನವಾಗಿ ಪ್ರಜ್ವಲಿಸುತ್ತಿದೆ . ಶ್ರೀ ಪೀಠದ ಇಂದಿನ ಸುವರ್ಣಯುಗದ ಪ್ರಶಂಸೆಗೆ ತರಳಬಾಳು ಗುರುಪರಂಪರೆಯು ಎಲ್ಲಾ ಗುರುವರ್ಯರ ಸಮಾಜಮುಖಿ ಕಾಳಜಿಯೇ ಕಾರಣವಾಗಿದೆ.
ಇಂತಹ ದೀರ್ಘ ಐತಿಹ್ಯ ಶ್ರೀ ಗುರು ಪರಂಪರೆಯ ಮೂಲಪುರುಷ ಶ್ರೀ ವಿಶ್ವಬಂಧು ಮರುಳಸಿದ್ದ ಕೇವಲ ಗುರುವಾಗದೇ ನಾಡಿನ ಎಲ್ಲಾ ವರ್ಗದ ಜನರ ಮನೆದೇವರಾಗಿರುವುದು ಅತ್ಯಂತ ವಿಭಿನ್ನವಾಗಿ ಕಂಡುಬಂದಿದೆ.
ಶ್ರೀ ಮರುಳಸಿದ್ದರು ಲೋಕ ಸಂಚಾರ ಕೈಗೊಂಡು ಜನರನ್ನು ಸುಜ್ಞಾನದ ತೆಕ್ಕೆಗೆ ಕರೆದೊಯ್ಯುವ ಸಂಧರ್ಭದಲ್ಲಿ ನಡೆದ ಜೀವಂತ ದೃಶ್ಯವಾಳಿಗಳ ಸ್ಮರಣಾರ್ಥವೇ ಇಂದು ಮರುಳಸಿದ್ದರ ನೂರಾರು ದೇವಾಲಯಗಳು ನಿರ್ಮಾಣವಾಗಿರುವುದು. ರಥೋತ್ಸವಗಳು ,ವಿಶೇಷ ಪೂಜಾ ಕೈಂಕರ್ಯಗಳು ದಿನ ಪ್ರತಿ ಜರುಗುತ್ತಿರುವುದು.
ಪಟ್ಟ ಭದ್ರ ಹಿತಾಸಕ್ತಿಗಳು ಮರುಳಸಿದ್ಧರ ಮೇಲೆ ಮದಿಸಿದ ಆನೆಯನ್ನು ಬಿಟ್ಟು ದಾಳಿ ನಡೆಸಿದಾಗ ಆನೆಯ ಕೋಡನ್ನು ಮುರಿದು ತಮ್ಮ ತಪಸ್ವೀ ಶಕ್ತಿಯಿಂದ ಆನೆಯನ್ನು ಮಣಿಸಿದ್ದರಿಂದ ಆನಗೋಡು ಮರುಳಸಿದ್ದರ ಪವಾಡ ಕ್ಷೇತ್ರವಾಗಿದೆ.
ಏ.2 ರಂದು ದಾವಣಗೆರೆಯ ಸಮೀಪದ ಆನಗೋಡಿನಲ್ಲಿ ಶ್ರೀ ಮದುಜ್ಜಯನಿ ಸದ್ದರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಪಾವನ ಸಾನ್ನಿಧ್ಯದಲ್ಲಿ ದಲಕ್ಷಾಂತರ ಸದ್ಭಕ್ತರ ಉಪಸ್ಥಿತಿಯಲ್ಲಿ ತರಳಬಾಳು ಗುರುಪರಂಪರೆಯ ಮೂಲಪುರುಷರ ಶ್ರೀ ಮರುಳಸಿದ್ದರ ಮಹಾರಥೋತ್ಸವ ಪ್ರತಿ ವರ್ಷದಂತೆ ನಡೆಯಲಿದೆ.
ನಾಡಿನ ಮಾಡಿ ಪೀಠಗಳ ಇತಿಹಾಸದಲ್ಲಿ ಜಾತ್ಯಾತೀತ, ಧರ್ಮಾತೀತವಾಗಿ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕ್ಷೇತ್ರಗಳಿಗೆ ಸ್ಮರಣೀಯ ಕೊಡುಗೆ ನೀಡಿ ಮಹಾ ದಾಸೋಹಿ ಎನಿಸಿದವರು ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಜಗದ್ಗುರುಗಳಾಗಿದ್ದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು.
ಭಾರತವು ಹಳ್ಳಿಗಳ ದೇಶ. ಹಳ್ಳಿಗಳು ಉದ್ದಾರವಾಗದ ಹೊರತು ದೇಶದ ಉದ್ಧಾರ ಅಸಾಧ್ಯ. ಹಳ್ಳಿಯ ಜನತೆಯನ್ನು ಮೊದಲು ಶಿಕ್ಷಣದ ಮೂಲಕ ಸುಶಿಕ್ಷಿತರನ್ನಾಗಿ ಮಾಡಬೇಕು. ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬೇಕು. ಭಾರತದ ಅನೇಕ ಸಾಮಾಜಿಕ ಸಮಸ್ಯೆಗಳಿಗೆ ಶಿಕ್ಷಣವೇ ಸಂಜೀವನಿ ಎಂಬುದು ಶ್ರೀ ತರಳಬಾಳು ಜಗದ್ಗುರು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ
ಮಹಾಸ್ವಾಮಿಗಳವರು ಮನಗಂಡಿದ್ದರು.
ಅದಕ್ಕಾಗಿ ಪೂಜ್ಯರು ಸ್ವಾತಂತ್ರ್ಯ ಪೂರ್ವ ಕಾಲದಿಂದಲೂ ಗ್ರಾಮೀಣ ಜನತೆಯ ಅಭಿವೃದ್ಧಿಗಾಗಿ ಅಹರ್ನಿಶಿ ದುಡಿದರು.
ರಸ್ತೆ, ವಿದ್ಯುತ್, ಕುಡಿಯುವ ನೀರಿನಂತಹ ಮೂಲಭೂತ ಸೌಲಭ್ಯಗಳಿರದ ಕಡೆಯಲ್ಲೂ ನೂರಾರು ಶಾಲಾಕಾಲೇಜುಗಳನ್ನು ತೆರೆದು, ಶಿಕ್ಷಣವು ಗ್ರಾಮೀಣರಿಗೆ ಸುಲಭವಾಗಿ ಲಭಿಸುವಂತೆ ಮಾಡಿದರು.
ದಾವಣಗೆರೆ ತಾಲ್ಲೂಕಿನ ಆನಗೋಡು ಗ್ರಾಮವು ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಇತಿಹಾಸದಲ್ಲಿ ಬಹುಮುಖ್ಯ ಸ್ಥಳ. ಬೃಹನ್ಮಠದ ಮೂಲ ಪುರುಷ ವಿಶ್ವಬಂಧು ಮರುಳಸಿದ್ದರು ನಡೆದಾಡಿದ ಪುಣ್ಯಕ್ಷೇತ್ರ.
ತರಳಬಾಳು ಮಠದ ಮೂಲ ಪುರುಷ ಕ್ರಾಂತಿಯೋಗಿ ವಿಶ್ವಬಂಧು ಮರುಳಸಿದ್ಧರಿಗೂ ದಾವಣಗೆರೆ ತಾಲ್ಲೂಕಿನ ಆನಗೋಡು ಗ್ರಾಮಕ್ಕೂ ಅವಿನಾಭಾವ ಸಂಬಂಧವಿದೆ. ಮರುಳಸಿದ್ಧರು ತಮ್ಮ ಹೋರಾಟದ ಬದುಕಿನಲ್ಲಿ ಪುರೋಹಿತ ವರ್ಗದ ಕೆಂಗಣ್ಣಿಗೆ ಗುರಿಯಾಗಿದ್ದರು. ಆಗ ಪಾಂಡ್ಯ ಅರಸರ ಸೇನೆಯು ಇವರನ್ನು ಬೆನ್ನಟ್ಟಿತು.
ಆಗ ಮರುಳಸಿದ್ಧರು ಸೇನೆಯಲ್ಲಿದ್ದ ಆನೆಯ ದಂತ (ಕೋಡು)ವನ್ನು ಮುರಿದು ತಮ್ಮ ಶೌರ್ಯವನ್ನು ತೋರಿದ ಸ್ಥಳವೇ ಆನಗೋಡು. ಹೀಗಾಗಿ ಈ ಐತಿಹ್ಯದ ನೆನಪಿಗಾಗಿ ಮರುಳಸಿದ್ಧರ ದೇವಾಲಯವಿದೆ. ಅಲ್ಲದೆ ಇಲ್ಲೊಂದು ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಶಾಖಾ ಮಠವೂ ಇತ್ತು. ಮತ್ತು ಕ್ರಿ ಶ ೧೮೪೧ ಸುಮಾರಿನಲ್ಲಿ ‘ಮರುಳಸಿದ್ಧ ದೇವರ ಚರಿತ್ರೆ’ ಎಂಬ ಸಾಗಂತ್ಯ ಬರೆದ ಕವಿ ರೇವಣಸಿದ್ಧರು ಓದುವ ಮಠದ ಉಪಾಧ್ಯಾಯರಾಗಿದ್ದುದು ಇದೇ ಊರಿನಲ್ಲಿ. ಹೀಗಾಗಿ ಹಿರಿಯ ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಈ ಊರಿನ ಶೈಕ್ಷಣಿಕ ಪ್ರಗತಿಗೆ ಅಪಾರವಾಗಿ ಶ್ರಮಿಸಿದರು.
ಮರುಳಸಿದ್ದರದು ಜನಪರ ನಡೆ. ಮೌಡ್ಯ, ಕಂದಾಚಾರಗಳ ವಿರೋಧಿ. ಮರುಳಸಿದ್ದರ ಈ ಚಟುವಟಿಕೆಗಳನ್ನು ದಮನ ಮಾಡಲು ಮೂಲಭೂತವಾದಿಗಳು ಉಚ್ಚಂಗಿಯ ಪಾಂಡ್ಯ ರಾಜನಿಗೆ ದೂರು ನೀಡಿದರು. ಆಗ ಪಾಂಡ್ಯ ರಾಜನು ಮರುಳಸಿದ್ಧರ ಮೇಲೆ ಸೈನ್ಯದೊಂದಿಗೆ ಮದಿಸಿದ
ಆನೆಯನ್ನು ಕಳುಹಿಸಿದನು. ಆಗ ಮರುಳಸಿದ್ದರು
ದುಷ್ಟ ಶಕ್ತಿಗಳ ವಿರುದ್ಧ ಹೋರಾಡಿ, ಮದಗಜದ ಕೊಂಬನ್ನು ಮುರಿದು ಜಯಶೀಲರಾದರು. ಅಂದಿನಿಂದ ಈ ಸ್ಥಳಕ್ಕೆ ಆನಗೋಡು’ಎಂಬ ಹೆಸರು ಬಂದಿತು.
ಇಂತಹ ಐತಿಹ್ಯಯುಳ್ಳ ಆನಗೋಡು ಗ್ರಾಮದಲ್ಲಿ 1965ರಲ್ಲಿ ಪ್ರೌಢಶಾಲೆ ಮತ್ತು 1973ರಲ್ಲಿ ಪದವಿ ಪೂರ್ವ ಕಾಲೇಜನ್ನು ಹಿರಿಯ ಶ್ರೀ ತರಳಬಾಳು ಜಗದ್ಗುರುಗಳವರು
ಆರಂಭಿಸಿದರು. ಇದರಿಂದ ಸುತ್ತಮುತ್ತಲಿನ ಇಪ್ಪತ್ತೈದಕ್ಕೂ ಹೆಚ್ಚಿನ ಹಳ್ಳಿಗಳ ಸಾವಿರಾರು ವಿದ್ಯಾರ್ಥಿಗಳು ಬದುಕನ್ನು ರೂಪಿಸಿಕೊಳ್ಳಲು ಸಾಧ್ಯವಾಗಿದೆ.
ಸುತ್ತಮುತ್ತಲಿನ ೨೦-೩೦ ಹಳ್ಳಿಗಳಿಗೆ ಆನಗೋಡು ಕೇಂದ್ರ ಸ್ಥಾನ. ಇಲ್ಲಿಯ ವಿದ್ಯಾರ್ಥಿಗಳು ಪ್ರೌಢಶಾಲಾ ಶಿಕ್ಷಣಕ್ಕಾಗಿ ದೂರದ ದಾವಣಗೆರೆ ನಗರವನ್ನು ಅವಲಂಬಿಸಬೇಕಾಗಿತ್ತು. ಅದಕ್ಕಾಗಿ ಇಲ್ಲೊಂದು ಪ್ರೌಢಶಾಲೆಯ ಅಗತ್ಯವಿದೆ ಎಂಬುದನ್ನು ಮನಗಂಡ ಶ್ರೀಗಳು ಪ್ರೌಢಶಾಲೆಯೊಂದನ್ನು ಪ್ರಾರಂಭಿಸಲು ಮುಂದಾದರು. ಆ ಶಾಲೆಗೆ ‘ಶ್ರೀ ಮರುಳಸಿದ್ದೇಶ್ವರ ಪ್ರೌಢಶಾಲೆ’ ಎಂದು ನಾಮಕರಣ ಮಾಡಿದರು.
ಪ್ರೌಢಶಾಲೆಯ ನಂತರದ ದಿನಗಳಲ್ಲಿ ಇಲ್ಲಿ ಪದವಿ ಪೂರ್ವ ಕಾಲೇಜನ್ನೂ ಸಹ ಪ್ರಾರಂಭಿಸಬೇಕೆಂದು ಸ್ಥಳೀಯ ಮುಖಂಡರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರಲ್ಲಿ ಅರಿಕೆ ಮಾಡಿಕೊಂಡರು.
ಅಷ್ಟೊತ್ತಿಗೆ ದಾವಣಗೆರೆ ನಗರದ ಹೃದಯ ಭಾಗದಲ್ಲಿರುವ ನಮ್ಮ ಶ್ರೀ ಗುರುಶಾಂತೇಶ್ವರ ಸ್ಮಾರಕ ವಿದ್ಯಾರ್ಥಿ ನಿಲಯದ ಕಟ್ಟಡದಲ್ಲಿ ಶ್ರೀ ಜಿ ಚನ್ನಪ್ಪ ಪದವಿ ಪೂರ್ವ ಕಾಲೇಜು ಪ್ರಾರಂಭಿಸಲಾಗಿತ್ತು. ಕಾರಣಾಂತರಗಳಿಂದ ಈ ಕಾಲೇಜನ್ನೇ ಆನಗೋಡು ಗ್ರಾಮಕ್ಕೆ ಸ್ಥಳಂತರಿಸಬೇಕೆಂಬ ಚರ್ಚೆಯು ನಡೆಯುತಿತ್ತು. ಅದಕ್ಕೆ ಸ್ಪಂದಿಸಿದ ಪೂಜ್ಯರು ದಾವಣಗೆರೆಯ ಪದವಿ ಪೂರ್ವ ಕಾಲೇಜನ್ನು ಆನಗೋಡಿಗೆ ಸ್ಥಳಾಂತರಿಸಲು ಒಪ್ಪಿದರು. ೧೯೭೨ರ ಶೈಕ್ಷಣಿಕ ವರ್ಷದಿಂದ ಆನಗೋಡಿನಲ್ಲಿ ಕಾಲೇಜು ಪ್ರಾರಂಭವಾಯಿತು.
ಶ್ರೀ ಜಿ ಚನ್ನಪ್ಪ ನಮ್ಮ ಸಮಾಜದ ಪ್ರಾತಃಸ್ಮರಣೀಯ ವ್ಯಕ್ತಿಗಳಲ್ಲಿ ಹೊಳಲ್ಕೆರೆ ತಾಲ್ಲೂಕಿನ ದೊಗ್ಗನಾಳ್ ಗ್ರಾಮದ ಶ್ರೀ ಜಿ ಚನ್ನಪ್ಪನವರು ಪ್ರಮುಖರು. ನ್ಯಾಯಶಾಸ್ತ್ರ ಪದವೀಧರರಾಗಿದ್ದ ಇವರು ಶ್ರೀ ಸಾಧು ಸದ್ಧರ್ಮ ಸಂಘದ ಮೊದಲ ಅಧ್ಯಕ್ಷರಾಗಿದ್ದ ಬಿ. ಲಿಂಗಯ್ಯನವರ ಮಗಳು ಪಾರ್ವತಮ್ಮನವರನ್ನು ವಿವಾಹವಾಗಿದ್ದರು. ಚನ್ನಪ್ಪನವರು ಚಿತ್ರದುರ್ಗ ಜಿಲ್ಲಾ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಬಹುವಾಗಿ ಶ್ರಮಿಸಿದವರು.
ಇವರ ಕಾಲದಲ್ಲಿ ಹಳ್ಳಿಗಳು ಶಾಲೆ, ರಸ್ತೆ, ಕುಡಿಯುವ ನೀರಿನ ಸೌಲಭ್ಯಗಳನ್ನು ಕಂಡವು. ಮೈಸೂರು ಪ್ರಜಾಪ್ರತಿನಿಧಿ ಸಭೆ ಮತ್ತು ನ್ಯಾಯ ವಿಧಾಯಕ ಮಂಡಳಿಯ ಸದಸ್ಯರಾಗಿ ಅಪಾರ ಸೇವೆ ಸಲ್ಲಿಸಿದರು. ಸ್ವಾತಂತ್ರ್ಯ ನಂತರ ಮೈಸೂರು ಸರ್ಕಾರದ ಸಹಾಯಕ ಅಡ್ವಕೇಟ್ ಜನರಲ್ ಮತ್ತು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿಗಳಾಗಿ ನ್ಯಾಯಾಂಗ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದರು.
ಬಿ.ಲಿಂಗಯ್ಯನವರು ಲಿಂಗೈಕ್ಯರಾದ ನಂತರ ಶ್ರೀ ಸಾಧು ಸದ್ಧರ್ಮ ಸಂಘದ ಅಧ್ಯಕ್ಷರಾಗುವ ಯೋಗವು ಇವರಿಗೆ ಒದಗಿ ಬಂದಿತು. ಅಂದಿನಿಂದ ಶ್ರೀ ಜಿ ಚನ್ನಪ್ಪನವರು. ಶ್ರೀ ಮಠದ ಮತ್ತು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ದುಡಿದರು. ಇವರ ಸೇವೆಯ ಸ್ಮರಣೆಗಾಗಿ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಈ ಕಾಲೇಜಿಗೆ ಶ್ರೀ ಜಿ ಚನ್ನಪ್ಪ ಪದವಿ ಪೂರ್ವ ಕಾಲೇಜು ಎಂದು ನಾಮಕರಣ ಮಾಡಿದರು.
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ೨೧ನೆಯ ಜಗದ್ಗುರುಗಳಾದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಪಟ್ಟಾಭಿಷೇಕ(೧೯೭೯) ಸಮಿತಿಯ ಅಧ್ಯಕ್ಷರಾಗಿಯೂ ಶ್ರೀ ಜಿ ಚನ್ನಪ್ಪನವರು ಕಾರ್ಯ ನಿರ್ವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಹಿರಿಯ ಶ್ರೀಗಳ ಆಶಯಗಳನ್ನು ಮುಂದುವರಿಸಿಕೊಂಡು ನಾಡಿನ ಜನಮುಖಿ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಮೂಲಕ ನಾಡಿನ ಸಂತ ಶ್ರೇಷ್ಠರೇಂದು ಜನಮಾನಸದಲ್ಲಿ ಆರಾಧಿಸಲ್ಪಡುವ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಈಗಿನ
ಯುಗಮಾನಕ್ಕೆ ತಕ್ಕಂತೆ ಆಂಗ್ಲ ಮಾಧ್ಯಮ ಶಾಲೆಯನ್ನೂ ಇತ್ತೀಚೆಗೆ ಅನಗೋಡಿನಲ್ಲಿ ಆರಂಭಿಸಿದರು.
ಈ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳಿಗೆ ಸುಸಜ್ಜಿತವಾದ ಕಟ್ಟಡದ
ಅವಶ್ಯಕತೆಯಿತ್ತು. ಅದನ್ನು ಮನಗಂಡ ಪೂಜ್ಯರು ಸುಮಾರು 10 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಭವ್ಯವಾದ ಕಟ್ಟಡವನ್ನು ವಿದ್ಯಾಸಂಸ್ಥೆಯ ವತಿಯಿಂದಲೇ ನಿರ್ಮಿಸಿಕೊಟ್ಟಿದ್ದಾರೆ.
ನಾನಾ ಕಾರಣಗಳಿಂದ ಆನಗೋಡಿನ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಶಾಲಾ ಕಾಲೇಜುಗಳ ಕಟ್ಟಡ ನಿರ್ಮಾಣಕ್ಕೆ ಕಾಲಕೂಡಿ ಬಂದಿರಲಿಲ್ಲ. ಏಳೆಂಟು ನೂರು ಸಂಖ್ಯೆಯ ವಿದ್ಯಾರ್ಥಿಗಳು ಇಲ್ಲಿ ಅಭ್ಯಾಸ ಮಾಡುತ್ತಿದ್ದು ಕೊಠಡಿಗಳ ಕೊರತೆಯಿದ್ದೂ ಸ್ಥಳೀಯ ಜನರ ಒತ್ತಾಯವಿದ್ದರೂ ಸಮನ್ವಯದ ಕೊರತೆಯಿಂದ ಕಟ್ಟಡ ನಿರ್ಮಾಣ ಕಾರ್ಯ ಹಿನ್ನಡೆಯಾಗಿತ್ತು.
ಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಸಂಕಲ್ಪ ಶಕ್ತಿಯಿಂದ ಈಗ ಶಾಲಾ ಸಮುಚ್ಚಯದ ಭವ್ಯವಾದ ಕಟ್ಟಡದ ಕಾಮಗಾರಿ ಮುಗಿದು ಹತ್ತು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮೂರು ಮಹಡಿಗಳ ವಿಶಿಷ್ಟ ವಾಸ್ತುಶಿಲ್ಪದಿಂದ ಕೂಡಿದ ಕಟ್ಟಡ ತಲೆಯೆತ್ತಿದೆ.
ನೂತನ ಕಟ್ಟಡದಲ್ಲಿ ಮೂವತ್ತಾರು ಕೊಠಡಿಗಳು ಲಭ್ಯವಿದ್ದು, ವಿಶಾಲ ತರಗತಿ ಕೋಣೆಗಳು, ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, ವಿಶ್ರಾಂತಿ ಕೋಣೆಗಳು, ಪ್ರತ್ಯೇಕ ಶೌಚಾಲಯಗಳು ಮತ್ತು ಮೂಲಭೂತ ಸೌಕರ್ಯಗಳಿರುತ್ತವೆ.
ಕಳೆದವರ್ಷ ನವೆಂಬರ್ನಿಂದಲೇ ನೂತನ ಕಟ್ಟಡದಲ್ಲಿ ಶೈಕ್ಷಣಿಕ ಚಟುವಟಿಕೆಗಳು ಗರಿಗೆದರಿವೆ. ಏ.2 ಗುರುವಾರ ಅಕ್ಕನ ಹುಣ್ಣಿಮೆ ಮತ್ತು ಆನಗೋಡು ಶ್ರೀ ಮರುಳಸಿದ್ದೇಶ್ವರ ರಥೋತ್ಸವ ನಡೆಯಲಿದೆ.
ಬಹುಜನರ ಅಪೇಕ್ಷಿತ ಶ್ರೀ ಮರುಳಸಿದ್ದೇಶ್ವರ ಪ್ರೌಢಶಾಲೆ ಮತ್ತು ಶ್ರೀ ಜಿ ಚನ್ನಪ್ಪ ಪದವಿ ಪೂರ್ವ ಕಾಲೇಜಿನ ಶಾಲಾ ಸಮುಚ್ಚಯದ ನೂತನ ಕಟ್ಟಡದಲ್ಲಿ ಶ್ರೀ ತರಳಬಾಳು ಜಗದ್ಗುರುಗಳವರ ಪಾದ ಪೂಜೆಯೊಂದಿಗೆ
ಶುಭಾರಂಭಗೊಳ್ಳಲಿದೆ. ನೂತನ ಶಾಲಾ ಸಂಕೀರ್ಣಕ್ಕೆ ಪರಮಪೂಜ್ಯರ ಆಗಮನ ಮತ್ತು ಪಾದಪೂಜಾ ಕಾರ್ಯಕ್ರಮವನ್ನು 3.30ಕ್ಕೆ ಏರ್ಪಡಿಸಲಾಗಿದೆ.
