ಪ್ರಿ-ವೆಡ್ಡಿಂಗ್ ಶೂಟ್ ಕ್ರೇಜ್ಗೆ ಬ್ರೇಕ್ ! ; ಹೊರಬಿತ್ತು ಹೊಸ ರೂಲ್ಸ್
ಚಿಕ್ಕಮಗಳೂರು: ಪ್ರವಾಸಿಗರ ಸ್ವರ್ಗ ಕಾಫಿನಾಡಿನಲ್ಲಿ ಇನ್ಮುಂದೆ ಪ್ರವಾಸಿಗರ ಆಟ ನಡೆಯಲ್ಲ! ಹೌದು, ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳು ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಇತ್ತೀಚೆಗೆ ನಡೆಯುತ್ತಿರುವ ಅತಿರೇಕದ ವರ್ತನೆಗಳಿಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಈಗ ‘ಬ್ರಹ್ಮಾಸ್ತ್ರ’ ಪ್ರಯೋಗಿಸಿದೆ.
ಜಿಲ್ಲಾಧಿಕಾರಿ ಎಂ.ಎನ್. ನಾಗರಾಜ್ ಅವರು ಪ್ರವಾಸಿಗರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದು, ಜಿಲ್ಲೆಗೆ ಬರುವ ಕೋಟಿ ಕೋಟಿ ಪ್ರವಾಸಿಗರಿಗೆ ಆತಿಥ್ಯ ನೀಡಲು ನಾವು ಬದ್ಧ, ಆದರೆ ಧಾರ್ಮಿಕ ಕೇಂದ್ರಗಳ ಪಾವಿತ್ರ್ಯತೆಗೆ ಧಕ್ಕೆ ತಂದರೆ ಅಥವಾ ಸಾರ್ವಜನಿಕರಿಗೆ ಮುಜುಗರ ಉಂಟುಮಾಡಿದರೆ ಕಠಿಣ ಕ್ರಮ ಗ್ಯಾರಂಟಿ ಎಂದಿದ್ದಾರೆ.
ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ನಡೆದ ಹಲ್ಲೆ ಪ್ರಕರಣದಿಂದ ಎಚ್ಚೆತ್ತಿರುವ ಜಿಲ್ಲಾಡಳಿತ, ದೇವಸ್ಥಾನದ ಆವರಣದಲ್ಲಿ ಪಾದರಕ್ಷೆ ಧರಿಸಿ ನಡೆಸುವ ಶೂಟಿಂಗ್ಗೆ ಬ್ರೇಕ್ ಹಾಕಲಿದೆ.
ದೇವಸ್ಥಾನದ ಆವರಣ ಮತ್ತು ಪ್ರವಾಸಿ ತಾಣಗಳಲ್ಲಿ ಶೂಟಿಂಗ್ ಮಾಡಬೇಕೆಂದರೆ ಇನ್ಮುಂದೆ ಪರ್ಮಿಷನ್ ಕಡ್ಡಾಯ. ಜೊತೆಗೆ ಎಷ್ಟು ಶುಲ್ಕ ಕಟ್ಟಬೇಕು ಎಂಬ ಪಟ್ಟಿಯೂ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
ರೆಸಾರ್ಟ್ ಮತ್ತು ಹೋಂ ಸ್ಟೇಗಳಿಗೆ ಪ್ರವಾಸಿಗರ ಶಿಸ್ತಿನ ಬಗ್ಗೆ ಈಗಾಗಲೇ ಜಿಲ್ಲಾಡಳಿತ ಮುನ್ನೆಚ್ಚರಿಕೆ ರವಾನಿಸಿದೆ.
ಪ್ರವಾಸಿಗರ ಜೊತೆ ಹೇಗೆ ವ್ಯವಹರಿಸಬೇಕು ಮತ್ತು ನಿಯಮ ಮೀರಿದವರನ್ನು ಹೇಗೆ ಹ್ಯಾಂಡಲ್ ಮಾಡಬೇಕು ಎಂದು ಅಧಿಕಾರಿಗಳಿಗೆ ಸ್ಪೆಷಲ್ ತರಬೇತಿ ನೀಡಲಾಗುತ್ತಿದೆ.
ಚಿಕ್ಕಮಗಳೂರು ಪ್ರಸಿದ್ಧ ಪ್ರವಾಸಿ ತಾಣ ಹೌದು, ಆದರೆ ಅದು ದೇವಸ್ಥಾನಗಳ ನೆಲೆಬೀಡು ಕೂಡ. ಪ್ರಿ-ವೆಡ್ಡಿಂಗ್ ಹೆಸರಲ್ಲಿ ದೇವಸ್ಥಾನದ ನಿಯಮ ಉಲ್ಲಂಘಿಸುವುದನ್ನು ಸಹಿಸಲು ಸಾಧ್ಯವಿಲ್ಲ. ಎಲ್ಲರಿಗೂ ಅನುಕೂಲವಾಗುವಂತೆ ಮುಜರಾಯಿ ಇಲಾಖೆಯಡಿ ಹೊಸ ರೂಲ್ಸ್ ತರುತ್ತಿದ್ದೇವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
