ಸಾಕ್ಷಾತ್ಕಾರಗೊಂಡ ವಿಶ್ವಬಂಧುವಿನ ವೈಭವದ ರಥಪರ್ವ
ದಾವಣಗೆರೆ: ತರಳಬಾಳು ಜಗದ್ಗುರು ಬೃಹನ್ಮಠದ ಮೂಲಪುರುಷನಾದ ಮರುಳಸಿದ್ಧರು ಈ ನಾಡು ಕಂಡ ಅಪೂರ್ವ ಯೋಗಿ. ರೇವಣಸಿದ್ಧರಿಂದ ದೀಕ್ಷಿತನಾದ ಮರುಳಸಿದ್ಧರು ಸಿದ್ಧ ಪರಂಪರೆಯಲ್ಲಿಯೇ ವಿಭಿನ್ನ ಮತ್ತು ವಿಶಿಷ್ಟ ವ್ಯಕ್ತಿತ್ವ ಹೊಂದಿದವರು.
ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದ ಯೋಗಿ ಪುರುಷ. ತನ್ನ ಉದಾತ್ತ ಆಶಯಗಳನ್ನು ಮುಂದುವರಿಸಿಕೊಂಡು ಹೋಗಲು ತೆಲಗುಬಾಳು ಸಿದ್ಧನಿಗೆ ತರಳಾ.. ಬಾಳು ಎಂದು ಆಶೀರ್ವದಿಸಿದ ದೂರದೃಷ್ಟಿಯ ನೇತಾರ. ಅವರ ಸದಾಶಯಗಳ ಮುಂದುವರಿಕೆಯೇ ತರಳಬಾಳು ಗುರು ಪರಂಪರೆ. ಕನ್ನಡದ ಮೊದಲ ವಚನಕಾರ್ತಿ ಅಕ್ಕಮಹಾದೇವಿಗೆ ಲಿಂಗ ದೀಕ್ಷೆ ನೀಡಿ ಆಶೀರ್ವಾದಿಸಿದವರು ಗುರು ಮರುಳಸಿದ್ಧರು.
ಅಕ್ಕನ ಹುಣ್ಣಿಮೆ ಎಂದೇ ಆಚರಿಸುತ್ತಿರುವ ಚೈತ್ರಮಾಸದ ಸೀಗಿ ಹುಣ್ಣಿಮೆಯ ದಿನವೇ ಸುಕ್ಷೇತ್ರ ಆನಗೋಡಿನಲ್ಲಿ ಮರುಳಸಿದ್ಧರ ರಥೋತ್ಸವ. ಪ್ರತಿವರ್ಷದ ಪದ್ಧತಿಯಂತೆ ಗುರುವಾರ ಸಂಜೆ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಮಠದ ಜಂಗಮರ ವಚನ , ಮಂತ್ರಘೋಶಗಳ ನಿನಾದದಲ್ಲಿ ಶ್ರೀ ಮರುಳಸಿದ್ಧರ ರಥೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನಡೆಯಿತು.
ವಿಶ್ವಬಂಧುವಿನ ರಥ ಸಾಗುವಾಗ ಹುಣ್ಣಿಮೆಯ ಚಂದ್ರನ ಉಪಸ್ಥಿತಿಯು ಹುಣ್ಣಿಮೆಗೂ ತರಳಬಾಳು ಮಠಕ್ಕೂ ದೈವೀ ಸಂಬಂಧದ ದಿವ್ಯ ಸಾಕ್ಷಾತ್ಕಾರವನ್ನು ಪುನಾರಾವರ್ತಿಸಿತು.
ಪರಮ ಪೂಜ್ಯ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಗುರು ಮರುಳಸಿದ್ಧರ ದೇವಾಲಯವನ್ನು ಪ್ರದಕ್ಷಿಣೆ ಹಾಕಿ, ಗರ್ಭಗುಡಿಯನ್ನು ಪ್ರವೇಶಿಸಿ ವಿಶ್ವಬಂಧು ಮರುಳಸಿದ್ದೇಶ್ವರರಿಗೆ ಭಕ್ತಿ ಸಮರ್ಪಿಸಿದರು.
ಅಪಾರ ಭಕ್ತರ ಜಯಘೋಷಗಳೊಂದಿಗೆ ರಥದ ಅಂಗಳ ಪ್ರವೇಶಿಸಿ ರಥ ಪ್ರದಕ್ಷಿಣೆಗೈದು ರಥದ ಗಾಲಿಗೆ ಕಾಯಿ ಸಮರ್ಪಿಸಿದರು. ನಂತರ ರಥವನೇರಿದ ಶ್ರೀ ಜಗದ್ಗುರುಗಳವರು ಮರುಳಸಿದ್ದರ ಉತ್ಸವ ಮೂರ್ತಿಗೆ
ಪೂಜಾ ಕೈಂಕರ್ಯಗಳೊಂದಿಗೆ ಭಕ್ತಿ ಸಮರ್ಪಿಸಿ. ಪತ್ರೆ ಪುಷ್ಪಗಳನ್ನು ಭಕ್ತರಿಗೆ ಪ್ರೋಕ್ಷಿಸಿ ಆಶೀರ್ವಾದಿಸಿದರು.
ಅಪಾರ ಭಕ್ತರಿಂದ ಶ್ರೀ ತರಳಬಾಳು ಗುರುಪರಂಪರೆಗೆ ಜಯವಾಗಲಿ, ವಿಶ್ವಬಂಧು ಮರುಳಸಿದ್ದೇಶ್ವರರಿಗೆ ಜಯವಾಗಲಿ, ಶ್ರೀ ತರಳಬಾಳು ಜಗದ್ಗುರುಗಳವರಿಗೆ ಜಯವಾಗಲೆಂದು ಭಕ್ತಿ ಪೂರ್ಣ ಘೋಷಣೆಗಳು ಮುಗಿಲು ಮುಟ್ಟಿದವು.
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿದರು. ಸಂಗಮೇಶಗೌಡ, ಎಚ್.ಡಿ. ಮಹೇಶ್ವರಪ್ಪ, ಮಾಜಿ ಶಾಸಕ ಎಂ. ಬಸವರಾಜನಾಯ್ಕ, ಗಂಗನಕಟ್ಟೆ ಸಂಗಣ್ಣ, ಹೆದ್ನೆ ಮುರಿಗೇಶಪ್ಪ, ಹೆಮ್ಮನಬೇತೂರು ಶಶಿಧರ್, ಹೊನ್ನೂರು ಮುನಿಯಪ್ಪ, ಆನಗೋಡು ಕರಿಬಸಪ್ಪ, ರವಿಕುಮಾರ್, ಪ್ರಕಾಶ್, ವಸಂತಕುಮಾರ್, ಬುಳ್ಳಾಪುರ ವಿನಯ್ ಹಾಜರಿದ್ದರು.
