ಡಿಜಿಟಲ್ ಜಗತ್ತು ಅವಕಾಶಗಳ ಮಹಾಸಾಗರ; ಬಳಕೆಯಲ್ಲಿ ಇರಲಿ ಎಚ್ಚರ
ಟಿಒಬಿ ನ್ಯೂಸ್ ಚಿತ್ರದುರ್ಗ
ತಂತ್ರಜ್ಞಾನವು ಇಂದಿನ ಪೀಳಿಗೆಗೆ ಅಂತ್ಯವಿಲ್ಲದ ಅವಕಾಶಗಳ ಬಾಗಿಲು ತೆರೆದಿದ್ದರೂ, ಅದರ ಬಳಕೆಯಲ್ಲಿ ವಿವೇಕ ಕಳೆದುಕೊಂಡರೆ ಅಪಾಯ ಅನಿವಾರ್ಯ ಎಂದು ಬಿಐಇಟಿ ಸಹಾಯಕ ಪ್ರಾಧ್ಯಾಪಕ ಎಚ್.ಸಿ. ಭರತ್ ಹೇಳಿದರು.
ನಗರದ ಡಾನ್ ಬೋಸ್ಕೋ ಪದವಿ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಅಂತರ ಕಾಲೇಜು ಟೆಕ್ನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಯುಗದಲ್ಲಿ ಕ್ಷಣಾರ್ಧದಲ್ಲಿ ಬೇಕಾದ ಮಾಹಿತಿಯನ್ನು ಅಂತರ್ಜಾಲ ಒದಗಿಸುತ್ತಿದೆ. ಆದರೆ ಪ್ರತಿಯೊಂದು ವಿಚಾರಕ್ಕೂ ಅಂತರ್ಜಾಲದ ಮೇಲೆ ಮಾತ್ರ ಅವಲಂಬಿಸದೆ, ಓದುವ, ಆಲೋಚಿಸುವ ಮತ್ತು ವಿಮರ್ಶಾತ್ಮಕವಾಗಿ ಚಿಂತಿಸುವ ಗುಣವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಾಮಾಜಿಕ ಜಾಲತಾಣಗಳ ಪ್ರಭಾವ ಆಧುನಿಕ ಜೀವನದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದು ಅವಕಾಶಗಳ ಹೊಸ ದಾರಿಗಳನ್ನು ತೆರೆದರೂ, ಅದರ ಸರಿಯಾದ ಆಯ್ಕೆ ಮತ್ತು ಬಳಕೆ ವ್ಯಕ್ತಿಯ ವಿವೇಚನೆಯಲ್ಲಿ ಇರಬೇಕು. ಡಿಜಿಟಲ್ ಜಗತ್ತನ್ನು ಸುರಕ್ಷಿತ, ಸಕಾರಾತ್ಮಕ ಹಾಗೂ ಅರ್ಥಪೂರ್ಣವಾಗಿ ಬಳಸಿಕೊಂಡಾಗ ಮಾತ್ರ ಅದು ಜೀವನಕ್ಕೆ ಮೌಲ್ಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸರ್ಕಾರಿ ವಿಜ್ಞಾನ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಹೇಮಾ ಸುರೇಶ್ ಯರಗುಂಟೆ, ಅಂತರ್ಜಾಲವು ನಮ್ಮ ನಿತ್ಯದ ಸಂವಹನ, ಕಲಿಕೆ ಮತ್ತು ಬೆಳವಣಿಗೆಯ ವಿಧಾನವನ್ನು ಸಂಪೂರ್ಣವಾಗಿ ಬದಲಿಸಿದೆ. ಇದು ವಿಶ್ವದ ಜನರನ್ನು ಪರಸ್ಪರ ಸಂಪರ್ಕಿಸುವುದರ ಜೊತೆಗೆ ಜ್ಞಾನವನ್ನು ಎಲ್ಲರಿಗೂ ಸುಲಭವಾಗಿ ತಲುಪಿಸುವ ಸೇತುವೆಯಾಗಿದೆ ಎಂದು ತಿಳಿಸಿದರು.
ಉತ್ತಮ ಮತ್ತು ಹೆಚ್ಚು ಮಾಹಿತಿಯುಕ್ತ ಭವಿಷ್ಯ ನಿರ್ಮಾಣಕ್ಕೆ ತಂತ್ರಜ್ಞಾನ ಪ್ರಮುಖ ಸಾಧನವಾಗಿದ್ದು, ವಿದ್ಯಾರ್ಥಿಗಳು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಫಾ. ಬೆನ್ನಿ ಕ್ರಿಸ್ತುದಾಸ್, ಆಡಳಿತಾಧಿಕಾರಿ ಫಾ. ಫೆಲಿಕ್ಸ್ ಸೆರೋವೋ, ಎನ್ಎಸ್ಎಸ್ ಜಿಲ್ಲಾ ನೋಡಲ್ ಅಧಿಕಾರಿ ಎನ್. ಧನಕೋಟಿ, ಉಪನ್ಯಾಸಕಿ ಎಂ.ಎಸ್. ಸೌಮ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
