ಚಿತ್ರದುರ್ಗ: ರಾಜ್ಯದಲ್ಲಿ ಬಹುಸಂಖ್ಯಾತರು, 200 ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸುವ ಕುರುಬ ಸಮುದಾಯದ ಐವರಿಗೆ ಸಚಿವ ಸ್ಥಾನ ನೀಡಬೇಕೆಂದು ಕರ್ನಾಟಕ ಪ್ರದೇಶ ಕುರುಬ ಸಂಘದ ಮಾಜಿ ನಿರ್ದೇಶಕ ಎಮ್ಮೆಹಟ್ಟಿ ಹನುಮಂತಪ್ಪ ಆಗ್ರಹಿಸಿದ್ದಾರೆ.
ಜಿಲ್ಲಾ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷವನ್ನು ನಿರಂತರವಾಗಿ ಬೆಂಬಲಿಸಿಕೊಂಡು ಬರುತ್ತಿರುವ ಕುರುಬರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ತರುವಲ್ಲಿ ಪ್ರಮುಖರಾಗಿದ್ದಾರೆ. ಆದರೆ, ಕುರುಬ ಸಮುದಾಯದ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿದ್ದರಿಂದ ಅವರು ಸಾಮಾಜಿಕ ನೀತಿ ಪಾಲಿಸಿದ ಕಾರಣ ಕುರುಬರಿಗೆ ಕೇವಲ ಒಂದೇ ಮಂತ್ರಿ ಸ್ಥಾನ ನೀಡಲಾಗುತ್ತಿತ್ತು ಎಂದರು.
ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರೂ ತಮ್ಮ ಸಮುದಾಯಕ್ಕೆ ಆದ್ಯತೆ ನೀಡದೆ ಇತರೆ ವರ್ಗದ ಶಾಸಕರನ್ನು ಮಂತ್ರಿಯನ್ನಾಗಿಸಿಕೊಂಡು ಸಾಮಾಜಿಕ ನ್ಯಾಯ ಪಾಲಿಸಿದರು. ಆದರೆ, ಈಗ ಸಿದ್ದರಾಮಯ್ಯ ಸಿಎಂ ಸ್ಥಾನವನ್ನೇ ತ್ಯಾಗ ಮಾಡಿದ್ದಾರೆ. ಕುರುಬ ಸಮಾಜದ ತ್ಯಾಗಕ್ಕೆ ಪ್ರತಿಫಲ ಹಾಗೂ ರಾಜ್ಯದಲ್ಲಿ ಜನಸಂಖ್ಯೆ ಆಧರಿಸಿ ಐವರು ಶಾಸಕರನ್ನು ಮಂತ್ರಿಯನ್ನಾಗಿಲೇಬೇಕು. ಒಬ್ಬರಿಗೆ ಡಿಸಿಎಂ ಸ್ಥಾನ ನೀಡಬೇಕೆಂದು ಆಗ್ರಹಿಸಿದರು.
ಈಗಾಗಲೇ ಇಬ್ಬರಿಗೆ ಸಚಿವ ಸ್ಥಾನ ನೀಡಿರುವುದು ಸ್ವಾಗರ್ತಹವಾಗಿದ್ದು, ಇವರೊಂದಿಗೆ ಹಿರಿಯ ಶಾಸಕರೂ, ಕುರುಬ ಸಮಾಜದ ಮುತ್ಸದ್ಧಿಗಳು, ಪಕ್ಷದ ನಿಷ್ಠಾವಂತರಾದ ಹೊಸದುರ್ಗ ಕ್ಷೇತ್ರದ ಬಿ.ಜಿ.ಗೋವಿಂದಪ್ಪ, ಬಸವರಾಜ್ ನೀಲಪ್ಪ ಶಿವಣ್ಣನವರ್, ರಾಘವೇಂದ್ರ ಹಿಟ್ನಾಳ್, ತರಿಕೆರೆ ಜಿ.ಎಚ್. ಶ್ರೀನಿವಾಸ್, ಕಡೂರು ಕೆ.ಎಸ್. ಆನಂದ್, ಬಿ. ಬೀಮಸೇನಾ. ಚಿಮ್ಮನಕಟ್ಟೆ,
ಉಮೇಶ್ ಮೇಟಿ ಇವರಲ್ಲಿ ಮೂವರನ್ನು ಸಂಪುಟ ವಿಸ್ತರಣೆ ವೇಳೆ ಪರಿಗಣಿಸಲೇಬೇಕು.
ಹಿರಿಯರೊಬ್ಬರಿಗೆ ಡಿಸಿಎಂ ಸ್ಥಾನ ನೀಡಬೇಕೆಂದು ಕೋರಿದರು.
ರಾಜ್ಯದಲ್ಲಿ ನಾಲ್ಕು ವಿಭಾಗಗಳಲ್ಲಿ ಕನಕ ಗುರುಪೀಠ ಸಮುದಾಯದ ಸಂಘಟನೆಗೆ ಅತ್ಯಂತ ಶ್ರಮಿಸುತ್ತಿದೆ. ಆದರೆ, ರಾಜಕೀಯ ಸ್ಥಾನಮಾನ ಪಡೆಯುವಲ್ಲಿ ಸಾಧ್ಯವಾಗಿಲ್ಲ. ಹಿಂದೆ ನಮ್ಮ ಸಮುದಾಯದ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿದ್ದು, ಇತರ ಸಮುದಾಯದವರಿಗೆ ಅವಕಾಶ
ದೊರೆಯಲಿ ಎಂಬ ವಿಶಾಲ ಹೃದಯವಂತಿಕೆ ಹೊಂದಿದ್ದೇವು. ಆದರೆ, ಪ್ರಸ್ತುತ ವರಿಷ್ಠರ ಮಾತಿಗೆ ಕಟ್ಟುಬಿದ್ದು ಸಿಎಂ ಸ್ಥಾನವನ್ನೇ ಸಣ್ಣ ಗೊಂದಲಕ್ಕೆ ಅವಕಾಶ ನೀಡದೆ ತ್ಯಾಗ ಮಾಡಿದ್ದಾರೆ. ಅಹಿಂದ ವರ್ಗದ ಜನರ ಶಕ್ತಿ ಆಗಿರುವ ಸಿದ್ದರಾಮಯ್ಯ ಅವರ ನಿರ್ಗಮನ ನಮ್ಮಲ್ಲಿ ರಾಜಕೀಯ ಅನಾಥ ಪ್ರಜ್ಞೆ ಮೂಡಿಸುತ್ತಿದೆ. ಇದನ್ನು ಹೋಗಲಾಡಿಸಲು ಮುಂದಿನ ಸಚಿವ ಸಂಪುಟದಲ್ಲಿ ಕುರುಬ ಸಮುದಾಯಕ್ಕೆ ಮೂರು ಮಂತ್ರಿ ಸ್ಥಾನ ನೀಡಬೇಕು ಎಂದರು.
ಸ್ವಾತಂತ್ರ್ಯ ಭಾರತದ ಬಳಿಕ ಇಲ್ಲಿಯವರೆಗೂ ಅತೀ ಹೆಚ್ಚು ಬಾರಿ ಸಿಎಂ, ಕೆಪಿಸಿಸಿ ಅಧ್ಯಕ್ಷ, ಮಂತ್ರಿ ಸೇರಿ ಅನೇಕ ಉನ್ನತ ಹುದ್ದೆಗಳನ್ನು ಅವಲಂಬಿಸಿರುವವರಿಗೆ ಹೆಚ್ಚು ಆದ್ಯತೆ ನೀಡದೆ ಕಾಂಗ್ರೆಸ್ ಪಕ್ಷವನ್ನು ನಿರಂತರ ಬೆಂಬಲಿಸಿಕೊAಡು ಬರುತ್ತಿರುವ ಕುರುಬ ಸೇರಿ ಇತರೆ ಅಹಿಂದ ವರ್ಗಗಳಿಗೆ ಹೆಚ್ಚು ರಾಜಕೀಯ ಪ್ರಾತಿನಿಧ್ಯ ನೀಡಿ ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ವರಿಷ್ಠರು ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಮಾಡಬೇಕೆಂದು ಹೇಳಿದರು.
ಪಕ್ಷಕ್ಕೆ ಸಿದ್ದರಾಮಯ್ಯ ಅವರನ್ನು ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ, ಕುರುಬ ಸಮುದಾಯದ ಮೇಲೆ ಹೆಚ್ಚು ಹಿಡಿತ ಹೊಂದಿರುವ, ಮುತ್ಸದ್ಧಿ ಎಚ್.ಎಂ.ರೇವಣ್ಣ ಅವರ ತ್ಯಾಗವನ್ನು ಪಕ್ಷದ ವರಿಷ್ಠರು ಗಮನಿಸಿ ವಿಧಾನ ಪರಿಷತ್ ಸದಸ್ಯರನ್ನಾಗಿಸಬೇಕೆಂದು
ಹೇಳಿದರು.
ಸತೀಶ್ ಜಾರಕಿಹೊಳಿ ಅವರು ಮಂತ್ರಿ ಸ್ಥಾನದತ್ತ ಹೆಚ್ಚು ಆಸಕ್ತಿ ತೋರಿದ್ದರಿಂದ ಪಕ್ಷದ ರಾಜ್ಯಾಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ಅವರಿಗೆ ನೀಡಿರುವುದು ಸ್ವಾಗರ್ತಹ ಎಂದು ತಿಳಿಸಿದರು. ಪಕ್ಷದ ಮತ ಬ್ಯಾಂಕ್ ಆಗಿರುವ ಕುರುಬ, ನಾಯಕ, ಮುಸ್ಲಿಂ, ದಲಿತ ಸೇರಿ ಇತರೆ ಸಮುದಾಯದವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಗಳನ್ನು ನೀಡಬೇಕು. ಇದರಿಂದ ಪಕ್ಷವನ್ನು ಬೆಂಬಲಿಸಿದ ಸಮುದಾಯಗಳಿಗೆ ಸ್ಥಾನಮಾನ ದೊರೆತ ಸಮಾಧಾನ ಆಗಲಿದೆ ಎಂದರು.
ಹಾಲುಮತ ಮಹಾಸಭಾದ ಜಿಲ್ಲಾಧ್ಯಕ್ಷ ಓಂಕಾರಪ್ಪ, ಮುಖಂಡರಾದ ಸೊಂಡೆಕೆರೆ ಶಿವಮೂರ್ತಿ ಇತರರಿದ್ದರು.
ಚಿಕ್ಕ ಫೋಟೋ
ಎಮ್ಮೆಹಟ್ಟಿ ಹನುಮಂತಪ್ಪ.
ಸುದ್ದಿಗೋಷ್ಠಿಯಲ್ಲಿ ಎಮ್ಮೆಹಟ್ಟಿ ಹನುಮಂತಪ್ಪ, ಸೊಂಡೆಕೆರೆ ಶಿವಮೂರ್ತಿ.
