ಮರಗಳ ಉಳಿವಿಗೆ ಧರಣಿ ಸತ್ಯಾಗ್ರಹ; ಪರಿಸರ ಪ್ರೇಮಿಗಳಿಗೆ ಸಂಘಟನೆಗಳ ಸಾಥ್
ಟಿಒಬಿ ನ್ಯೂಸ್ ಚಿತ್ರದುರ್ಗ
ಸರ್ಕಾರಿ ವಿಜ್ಞಾನ ಕಾಲೇಜು ಹಾಗೂ ತೋಟಗಾರಿಕೆ ಇಲಾಖೆಯ ಆವರಣದಲ್ಲಿರುವ ಮರಗಳ ಉಳಿವಿಗಾಗಿ ಏಪ್ರಿಲ್ 6ರಂದು ಒಂದು ದಿನದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
ರೈನ್ ಟ್ರಸ್ಟ್ (ರಿ), ಕರ್ನಾಟಕ ಜ್ಞಾನ–ವಿಜ್ಞಾನ ಸಮಿತಿ ಮನವಿಗೆ ಅಖಿಲ ಕರ್ನಾಟಕ ವನ ಕೃಷಿ ಹಾಗೂ ಶ್ರೀಗಂಧ ಬೆಳೆಗಾರರ ಸಂಘ, ವಿಜ್ಞಾನ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘ, ರಿದ್ದಿ ಫೌಂಡೇಶನ್, ಪೂಜಾ ಚಾರಿಟಬಲ್ ಟ್ರಸ್ಟ್, ಹಿರಿಯ ನಾಗರೀಕರ ಸಂಘ, ಕನ್ನಡ ಪರ, ದಲಿತ, ಮಹಿಳಾ ಹಾಗೂ ರೈತ ಸಂಘಟನೆಗಳು ಸೇರಿದಂತೆ ಹಲವಾರು ಸಂಘ–ಸಂಸ್ಥೆಗಳು ಸ್ಪಂದಿಸಿ ಧರಣಿಗೆ ಕೈಜೋಡಿಸಿವೆ.
ಪರಿಸರ ಸಂರಕ್ಷಣೆ ಮತ್ತು ಹಸಿರು ವಾತಾವರಣ ಉಳಿಸುವ ಉದ್ದೇಶದಿಂದ ನಡೆಯುವ ಈ ಸತ್ಯಾಗ್ರಹದಲ್ಲಿ ಸುಮಾರು 100ಕ್ಕೂ ಹೆಚ್ಚು ರೈತರು, ವಿದ್ಯಾರ್ಥಿಗಳು, ಮಹಿಳಾ ಸಂಘದ ಸದಸ್ಯರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಪರಿಸರ ಪ್ರೇಮಿ ಡಾ.ಎಚ್.ಕೆ.ಎಸ್.ಸ್ವಾಮಿ ತಿಳಿಸಿದ್ದಾರೆ.
