ಮುರುಘಾ ಮಠದಲ್ಲಿ ಅಕ್ಕಮಹಾದೇವಿ ಶರಣೋತ್ಸವ; ಸ್ತ್ರೀಕುಲದ ಅಸ್ಮಿತೆ ಅಕ್ಕ
ಚಿತ್ರದುರ್ಗ: ಅಕ್ಕ ವಚನಕಾರರ ಉಜ್ವಲ ನಕ್ಷತ್ರ. ಶ್ರೇಷ್ಠ ಅನುಭಾವಿ, ಕನ್ನಡದ ಮೊಟ್ಟಮೊದಲ ಕವಯತ್ರಿ ಅಷ್ಟೇ ಅಲ್ಲದೇ ಸ್ತ್ರೀ ಕುಲಕ್ಕೆ ಗೌರವ ತಂದುಕೊಡುವ ಕೆಲಸ ಆಕೆಯಿಂದ ನಡೆಯಿತು. ಹೆಣ್ಣಿಗೆ ಆ ಕಾಲದಲ್ಲಿ ಯಾವ ಸ್ಥಾನಮಾನ ಇತ್ತು ಎನ್ನುವುದನ್ನು ಊಹಿಸಿಕೊಂಡರೆ ಮೈ ರೋಮಾಂಚನವಾಗುತ್ತದೆ. ಅಂತಹ ಕಠಿಣ ವ್ಯವಸ್ಥೆಯಲ್ಲಿ ಸ್ತ್ರೀಕುಲದ ಅಸ್ಮಿತೆಯನ್ನು ಉಳಿಸಲು ಆದರ್ಶಕ್ಕಾಗಿ ಒಂದು ವ್ಯವಸ್ಥೆಯನ್ನೇ ಧಿಕ್ಕರಿಸಿ ಬಂದಿದ್ದು ಇತಿಹಾಸ ಎಂದು ಸಹಾಯಕ ಪ್ರಾಧ್ಯಾಪಕಿ ಟಿ.ಗಾಯತ್ರಿ
ನಗರದ ಮುರುಘಾ ಮಠದಲ್ಲಿ ಆಯೋಜಿಸಿದ್ದ ಅಕ್ಕಮಹಾದೇವಿ ಶರಣೋತ್ಸವದಲ್ಲಿ ಮಾತನಾಡಿದರು.
12ನೇ ಶತಮಾನದಲ್ಲೇ ಬಸವಾದಿ ಶರಣರು ವಚನ ಸಾಹಿತ್ಯದ ಮೂಲಕ ವಿಶ್ವಕ್ಕೆ ಬಹುದೊಡ್ಡ ಕೊಡುಗೆ ನೀಡಿದರು. ಸಾಮಾಜಿಕ, ಆರ್ಥಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಪ್ರಗತಿ ಸಾಧಿಸುವಲ್ಲಿ ಯಶಸ್ಸು ಕಂಡರು ಎಂದರು.
ಬಸವಣ್ಣನವರ ನೇತೃತ್ವದಲ್ಲಿ ಅಂದಿನ ಹಿರಿಕಿರಿಯ ಶರಣರೆಲ್ಲ ಸೇರಿಕೊಂಡು ಉಜ್ವಲ ಪರಂಪರೆಗೆ ನಾಂದಿ ಹಾಡಿದರು. ಅದರ ಬಳುವಳಿಯೇ ಅಕ್ಕಮಹಾದೇವಿ’ ಎಂದು ತಿಳಿಸಿದರು.
ಸಾಮಾಜಿಕ ಮತ್ತು ರಾಜಪ್ರಭುತ್ವ ಎರಡನ್ನೂ ವಿರೋಧಿಸಿದ ಅಕ್ಕನ ಇಡೀ ಬದುಕೇ ಹೋರಾಟದ ಹಾದಿಯಾಗಿತ್ತು. ಈ ಹೋರಾಟ ಕೇವಲ ತನಗಾಗಿ ಅಲ್ಲ. ಇಡೀ ಹೆಣ್ಣುಸಂಕುಲಕ್ಕಾಗಿಯೇ ಆಕೆಯ ಹೋರಾಟ ಮೀಸಲಿತ್ತು ಎಂದರೆ ತಪ್ಪಿಲ್ಲ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹಿಳೆಗೆ ಇನ್ನು ಅನೇಕ ಕ್ಷೇತ್ರಗಳಲ್ಲಿ ಸಮಾನ ಅವಕಾಶಗಳು ದೊರೆಯುತ್ತಿಲ್ಲ. 900ವರ್ಷಗಳ ಇತಿಹಾಸ ಅವಲೋಕಿಸಿದಾಗ ಪುರುಷ ಪ್ರಾಬಲ್ಯದ ಕಾಲದಲ್ಲಿನ ಹೆಣ್ಣಿನ ಸ್ಥಿತಿ ಊಹಿಸಿಕೊಳ್ಳಲು ಅಸಾಧ್ಯ. ಆದರೆ 12ನೇ ಶತಮಾನದಲ್ಲಿ ಅಕ್ಕಮಹಾದೇವಿ ವಿವಾಹವಾದರೂ ಸಹ ಲೌಕಿಕ ಪ್ರಪಂಚದ ಗೊಡವೆ ಬೇಡ ಎಂದು ಧಿಕ್ಕರಿಸಿ ಪತಿ ಚನ್ನಮಲ್ಲಿಕಾರ್ಜುನ ಎನ್ನುವ ಪಾರಮಾರ್ಥಿಕ ಗಂಡನನ್ನು ಹುಡುಕುತ್ತ ಕಲ್ಯಾಣ ಪ್ರವೇಶಿಸಿದರು ಎಂದು ತಿಳಿಸಿದರು.
ಅನುಭವ ಮಂಟಪದ ಕಣ್ಮಣಿಯಾಗಿ ಶರಣರೊಂದಿಗೆ ನೆಲೆ ನಿಂತು ವಾದ ಪ್ರತಿವಾದಗಳ ಮೂಲಕ ಅನೇಕ ವಚನಗಳನ್ನು ರಚಿಸುತ್ತಾಳೆ. ಅವಿರಳಜ್ಞಾನಿ ಎಂಬ ಬಿರುದಿಗೆ ಭಾಜನರಾದ ಚನ್ನಬಸವಣ್ಣನವರೇ ಅಕ್ಕನ ವಚನಗಳನ್ನು ಮೆಚ್ಚಿದ ಉದಾಹರಣೆ ಇದೆ ಎಂದರು.
ಎಸ್ಜೆಎಂ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ಅಕ್ಕಮಹಾದೇವಿ ಪ್ರಕೃತಿ ಧರ್ಮಪಾಲಕಿ. ಇಡೀ ಜಗತ್ತು ಅಕ್ಕನ ವ್ಯಕ್ತಿತ್ವಕ್ಕೆ ಗೌರವ ಕೊಡಬೇಕಿದೆ. ಅನುಭವ ಮಂಟಪದಲ್ಲಿ ಎದುರಾದ ಪ್ರಶ್ನೆಗಳಿಗೆ ಧೀರೋದಾತ್ತ ಉತ್ತರ ನೀಡುತ್ತ ಸಾಗಿದ ಪರಿ ಊಹೆಗೆ ನಿಲುಕದ್ದು. ಅಕ್ಕನ ಶ್ರೇಷ್ಠ ವ್ಯಕ್ತಿತ್ವ ಮತ್ತೆ ಮತ್ತೆ ಇಂತಹ ಕಾರ್ಯಕ್ರಮಗಳ ಮೂಲಕ ಅನಾವರಣಗೊಳ್ಳಬೇಕಿದೆ. ಆಕೆಯ ಬಗ್ಗೆ ಹೇಳುತ್ತ ಹೋದರೆ ನಾಲಗೆ ಸೋಲುತ್ತದೆ. ಅಂತಹ ಆಧ್ಯಾತ್ಮಲೋಕದ ಮುಕುಟಮಣಿ’ ಎಂದು ಸ್ಮರಿಸಿದರು.
ರಾವಂದೂರು ಮೋಕ್ಷಪತಿ ಸ್ವಾಮೀಜಿ, ಕಲ್ಕೆರೆಯ ಪೂರ್ಣಾನಂದರು, ಬಸವ ಮುರುಘೇಂದ್ರ ಸ್ವಾಮೀಜಿ, ಬಾಲ್ಯವಿವಾಹ ವಿರೋಧಿ ಸಮಿತಿ ಅಧ್ಯಕ್ಷೆ ಕವಿತಾ ಹನುಮಂತರೆಡ್ಡಿ ಇದ್ದರು.
