ಉತ್ತಮ ಮಳೆ-ಬೆಳೆಗಾಗಿ ಪ್ರಾರ್ಥನೆ;
48ನೇ ದಿನದ ಮಂಡಲ ಪೂಜೆ
ಟಿಒಬಿ ನ್ಯೂಸ್ ಚಳ್ಳಕೆರೆ
ತಾಲೂಕಿನ ನರಹರಿ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀಗುರು ಕರಿಬಸವೇಶ್ವರಸ್ವಾಮಿ ದೇವಸ್ಥಾನದಲ್ಲಿ ಮಾರ್ಚ್ 31 ಮಂಗಳವಾರ 48ನೇ ದಿನದ ಮಂಡಲ ಪೂಜಾ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ವೀರಭದ್ರಸ್ವಾಮಿ ತಿಳಿಸಿದ್ದಾರೆ.
ಸೋಮವಾರ ದೇವಸ್ಥಾನ ಆವರಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನರಹರಿನಗರದ ಸದ್ಭಕ್ತರು ಹಾಗೂ ಶ್ರೀಗುರು ಕರಿಬಸವೇಶ್ವರ ಸ್ವಾಮಿ ಸೇವಾ ಟ್ರಸ್ಟ್ನ ಸಹಕಾರದಿಂದ ದೇವಸ್ಥಾನ ನಿರ್ಮಾಣಗೊಂಡು 48 ದಿನಗಳು ಪೂರೈಸಿರುವ ಹಿನ್ನೆಲೆಯಲ್ಲಿ ವಿಶೇಷ ಮಂಡಲ ಪೂಜೆ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನವಗ್ರಹ ಪೂಜೆ, ಅಷ್ಟಲಕ್ಷ್ಮಿ ಪೂಜೆ, ಪಾರ್ವತಿ-ಪರಮೇಶ್ವರ ಪೂಜೆ, ವಿಘ್ನೇಶ್ವರ ಪೂಜೆ ಸೇರಿದಂತೆ ಹಲವು ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ. ಲೋಕಕಲ್ಯಾಣ, ಉತ್ತಮ ಮಳೆ ಹಾಗೂ ಸಮೃದ್ಧ ಬೆಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು ಎಂದರು.
ದೇವಸ್ಥಾನ ಸಮಿತಿ ಸದಸ್ಯ ಕೆಂಚವೀರನಹಳ್ಳಿ ಎನ್. ಮಲ್ಲೇಶ್ ಮಾಹಿತಿ ನೀಡಿ, ಮಂಗಳವಾರ ಬೆಳಗ್ಗೆ 9 ಗಂಟೆಯಿಂದ ವಿಶೇಷ ಪೂಜೆಗಳು ಆರಂಭವಾಗಿ, ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ನೆರವೇರಲಿದೆ ಎಂದು ಹೇಳಿದರು. ಆಗಮಿಸುವ ಎಲ್ಲ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದೂ ತಿಳಿಸಿದರು.
ದೇವಸ್ಥಾನ ಉದ್ಘಾಟನೆಯಾದ ಬಳಿಕ ಇದೇ ಮೊದಲ ಬಾರಿಗೆ 48ನೇ ದಿನದ ವಿಶೇಷ ಪೂಜೆಗಳು ನಡೆಯುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದರ್ಶನ ಪಡೆದು ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಮನವಿ ಮಾಡಿದರು.
ಸಭೆಯಲ್ಲಿ ಆರ್ಚಕ ವೀರಸ್ವಾಮಿ, ಪ್ರವೀಣ, ಮಾರುತಿಪ್ರಸಾದ್, ರೇಣುಕಾಸ್ವಾಮಿ, ರಾಜಣ್ಣ, ದಯಾನಂದಪ್ರಹ್ಲಾದ್ ಹಾಗೂ ನಿವೃತ್ತ ಶಿಕ್ಷಕ ರಾಮಚಂದ್ರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
