ನಮ್ಮ ಅಡುಗೆಮನೆಯ ಸಾಂಬಾರ ಪದಾರ್ಥಗಳಲ್ಲಿ ಬೆಳ್ಳುಳ್ಳಿಗೆ ಪ್ರಮುಖ ಸ್ಥಾನವಿದೆ. ಕೇವಲ ರುಚಿಗಷ್ಟೇ ಅಲ್ಲದೆ, ಆಯುರ್ವೇದದಲ್ಲಿ ಬೆಳ್ಳುಳ್ಳಿಯನ್ನು ಅತ್ಯುತ್ತಮ ಔಷಧಿಯಾಗಿ ಬಳಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿ ಮತ್ತು ತಪ್ಪು ಆಹಾರ ಪದ್ಧತಿಯಿಂದಾಗಿ ಅನೇಕರು ಬೊಜ್ಜು ಹಾಗೂ ರೋಗನಿರೋಧಕ ಶಕ್ತಿಯ ಕೊರತೆಯಿಂದ ಬಳಲುತ್ತಿದ್ದಾರೆ. ಆದರೆ, ಪ್ರತಿದಿನ ಬೆಳಿಗ್ಗೆ ಎದ್ದಾಕ್ಷಣ ಹಸಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ದೇಹದ ತೂಕವನ್ನು ಸುಲಭವಾಗಿ ಇಳಿಸಿಕೊಳ್ಳಬಹುದು ಮತ್ತು ಹತ್ತಾರು ಕಾಯಿಲೆಗಳಿಂದ ದೂರವಿರಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಬೆಳ್ಳುಳ್ಳಿಯನ್ನು ಬೇಯಿಸಿ ತಿನ್ನುವುದಕ್ಕಿಂತ ಹಸಿಯಾಗಿ ತಿನ್ನುವುದರಿಂದ ಅದರಲ್ಲಿರುವ ‘ಅಲಿಸಿನ್’ (Allicin) ಎಂಬ ಶಕ್ತಿಶಾಲಿ ಅಂಶವು ನೇರವಾಗಿ ದೇಹವನ್ನು ಸೇರುತ್ತದೆ. ಹಸಿ ಬೆಳ್ಳುಳ್ಳಿ ಸೇವನೆಯಿಂದ ಏನೆಲ್ಲಾ ಲಾಭಗಳಿವೆ ಎಂಬುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
1. ಬೊಜ್ಜು ಕರಗಿಸಲು ರಾಮಬಾಣ
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಸಿ ಬೆಳ್ಳುಳ್ಳಿಯ ಎಸಳುಗಳನ್ನು ಅಗಿದು ತಿನ್ನುವುದರಿಂದ ದೇಹದಲ್ಲಿನ ಚಯಾಪಚಯ ಕ್ರಿಯೆ (Metabolism) ಹೆಚ್ಚುತ್ತದೆ. ಇದು ದೇಹದಲ್ಲಿ ಸಂಗ್ರಹವಾಗಿರುವ ಅನಗತ್ಯ ಕೊಬ್ಬನ್ನು ಕರಗಿಸಿ, ಬೊಜ್ಜಿನ ಸಮಸ್ಯೆಯನ್ನು ನಿಯಂತ್ರಣಕ್ಕೆ ತರುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಸುಲಭ ಹಾಗೂ ನೈಸರ್ಗಿಕ ಉಪಾಯವಾಗಿದೆ.
2. ಜೀರ್ಣಕ್ರಿಯೆ ಸರಾಗ, ಅಜೀರ್ಣ ಮುಕ್ತಿ
ಅಜೀರ್ಣ, ಗ್ಯಾಸ್ಟ್ರಿಕ್ ಹಾಗೂ ಮಲಬದ್ಧತೆಯಿಂದ ಬಳಲುತ್ತಿರುವವರಿಗೆ ಬೆಳ್ಳುಳ್ಳಿ ಉತ್ತಮ ಮದ್ದು. ಇದು ಜೀರ್ಣಕಾರಿ ರಸಗಳ ಸ್ರವಿಸುವಿಕೆಯನ್ನು ಪ್ರಚೋದಿಸಿ ಪಚನಕ್ರಿಯೆಯನ್ನು ಸರಾಗಗೊಳಿಸುತ್ತದೆ. ಹೊಟ್ಟೆಯ ಉರಿ ಮತ್ತು ಕರುಳಿನ ಸೋಂಕುಗಳನ್ನು ನಿವಾರಿಸಲು ಹಸಿ ಬೆಳ್ಳುಳ್ಳಿ ಸಹಕಾರಿಯಾಗಿದೆ.
3. ರೋಗ ನಿರೋಧಕ ಶಕ್ತಿ ಹೆಚ್ಚಳ
ಬೆಳ್ಳುಳ್ಳಿಯಲ್ಲಿ ಆಂಟಿ-ಬ್ಯಾಕ್ಟೀರಿಯಲ್ ಮತ್ತು ಆಂಟಿ-ಆಕ್ಸಿಡೆಂಟ್ ಗುಣಗಳು ಸಮೃದ್ಧವಾಗಿವೆ. ನಿಯಮಿತವಾಗಿ ಹಸಿ ಬೆಳ್ಳುಳ್ಳಿ ಸೇವಿಸುವುದರಿಂದ ದೇಹದ ರೋಗ ನಿರೋಧಕ ಶಕ್ತಿ (Immunity) ದುಪ್ಪಟ್ಟಾಗುತ್ತದೆ. ಇದು ಋತುಮಾನ ಬದಲಾದಾಗ ಬರುವ ಜ್ವರ, ನೆಗಡಿ, ಕೆಮ್ಮು ಮತ್ತು ಉಸಿರಾಟದ ತೊಂದರೆಗಳನ್ನು ತಡೆಯುತ್ತದೆ. ಕೇವಲ ಒಂದು ಎಸಳನ್ನು ಬಾಯಲ್ಲಿ ಇಟ್ಟುಕೊಳ್ಳುವುದರಿಂದಲೂ ಉಸಿರಾಟದ ಹಾದಿ ನಿರಾಳವಾಗುತ್ತದೆ.
4. ರಕ್ತಹೀನತೆ (Anemia) ಮತ್ತು ನಿಶ್ಯಕ್ತಿಗೆ ಬ್ರೇಕ್
ದೇಹದಲ್ಲಿ ಕಬ್ಬಿಣಾಂಶದ (Iron) ಕೊರತೆಯಾದಾಗ ರಕ್ತಹೀನತೆ ಉಂಟಾಗಿ ತೀವ್ರ ನಿಶ್ಯಕ್ತಿ ಕಾಡುತ್ತದೆ. ಬೆಳ್ಳುಳ್ಳಿಯು ದೇಹದಲ್ಲಿ ಕಬ್ಬಿಣಾಂಶವನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದರಿಂದ ರಕ್ತದ ಉತ್ಪತ್ತಿ ಹೆಚ್ಚಾಗಿ ನಿಶ್ಯಕ್ತಿ ದೂರವಾಗುತ್ತದೆ. ಜೊತೆಗೆ, ಇದು ರಕ್ತ ಹೆಪ್ಪುಗಟ್ಟುವುದನ್ನು ತಡೆದು, ರಕ್ತ ಸಂಚಾರವನ್ನು ಸರಾಗಗೊಳಿಸುತ್ತದೆ. ಇದರಿಂದ ಹೃದಯದ ಆರೋಗ್ಯವೂ ಸುಧಾರಿಸುತ್ತದೆ.
ಗಮನಿಸಿ: ಬೆಳ್ಳುಳ್ಳಿ ತಿಂದ ತಕ್ಷಣ ಬಾಯಿ ವಾಸನೆ ಬರುತ್ತದೆ ಎಂದು ಹಲವರು ಇದನ್ನು ತಿನ್ನಲು ಹಿಂಜರಿಯುತ್ತಾರೆ. ಬೆಳ್ಳುಳ್ಳಿ ತಿಂದ ತಕ್ಷಣ ಸ್ವಲ್ಪ ಪುದೀನಾ ಎಲೆ, ಸೇಬು ಅಥವಾ ಒಂದು ಲೋಟ ಉಗುರುಬೆಚ್ಚಗಿನ ನೀರನ್ನು ಕುಡಿಯುವುದರಿಂದ ಬಾಯಿಯ ದುರ್ವಾಸನೆಯನ್ನು ತಡೆಯಬಹುದು. ತೀವ್ರವಾದ ಆಸಿಡಿಟಿ ಸಮಸ್ಯೆ ಇರುವವರು ವೈದ್ಯರ ಸಲಹೆ ಪಡೆದು ಸೇವಿಸುವುದು ಉತ್ತಮ.
