ಚಿತ್ರದುರ್ಗ : ಶಿಕ್ಷಕನ ವೃತ್ತಿ ದೇವರಿಗೆ ಪ್ರಿಯವಾದದ್ದು, ಒಬ್ಬ ಶಿಕ್ಷಕ ತನ್ನ ಜವಾಬ್ದಾರಿ ಕರ್ತವ್ಯಗಳಿಂದ ಅದೆಷ್ಟು ವಿದ್ಯಾರ್ಥಿಗಳಿಗೆ ಅಕ್ಷರದಾನ ಮಾಡುವುದರ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಯನ್ನಾಗಿ ರೂಪಿಸಲು ತನ್ನದೇ ಆದ ಶ್ರಮವನ್ನ ವಹಿಸಿದ್ದಾರೆ, ಬಹು ದಿನಗಳ ಸರ್ಕಾರಿ ಶಿಕ್ಷಕರ ಕನಸಾಗಿ ಉಳಿದಿರುವಂತ ಗುರುಭವನದ ಭೂಮಿ ಪೂಜೆಯನ್ನು ಅತಿ ಶೀಘ್ರದಲ್ಲೇ ನೆರವೇರಿಸಲಾಗುವುದು ಎಂದು ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರು ತಿಳಿಸಿದರು.
ನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಸಭಾಂಗಣದಲ್ಲಿ ಶನಿವಾರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ನಿರ್ದೇಶಕರು ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು, ದೇಶದಲ್ಲಿ ಶಿಕ್ಷಕರ ಪಾತ್ರ ಅನನ್ಯವಾದದ್ದು, ಶಿಕ್ಷಕರ ವೃತ್ತಿ ಪವಿತ್ರವಾದದ್ದು ಶಿಕ್ಷಕರು ತಮ್ಮ ಕಾರ್ಯವನ್ನು ಶ್ರದ್ಧೆಯಿಂದ ನಿರ್ವಹಿಸಿದರೆ ಅವರು ದೇವರಿಗೆ ಪ್ರಿಯವಾಗುತ್ತಾರೆ ಎಂದು ತಿಳಿಸಿದರು.

ಶಿಕ್ಷಕರ ಮಧ್ಯ ಚುನಾವಣೆ ನಡೆಯಬಾರದು ಎಲ್ಲರೂ ಒಟ್ಟಾಗಿ ಯಾವುದೇ ರೀತಿ ವಿರೋಧವಿಲ್ಲದೆ ಅವಿರೋಧವಾಗಿ ನಡೆಯಬೇಕು ಆಗ ಶಿಕ್ಷಕರ ನಡುವೆ ಉತ್ತಮ ಸಂಬಂಧ ಬೆಳೆಯುತ್ತದೆ. ಸಂಘವು ರಾಜ್ಯಕ್ಕೆ ಮಾದರಿಯಾಗಿ ನಡೆಯಬೇಕು ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವಂತಹ ಕೆಲಸವಾಗಬೇಕು ಆಗ ಮಾತ್ರ ಸಂಘಕ್ಕೆ ಒಂದು ಘನತೆ ಗೌರವ ದೊರೆತಂತಾಗುತ್ತದೆ ಎಂದು ತಿಳಿಸಿದರು.
ಚಿತ್ರದುರ್ಗ ಜಿಲ್ಲೆ ಅಭಿವೃದ್ಧಿಗಾಗಿ ಕೆಎಂಇಆರ್ಸಿ ಅಡಿಯಲ್ಲಿ 45 ಕೋಟಿ ಅನುದಾನಕ್ಕೆ ಪ್ರಸ್ತಾವನೆಯನ್ನ ಕಳಿಸಲಾಗಿದ್ದು ಹಣ ಬಂದ ಕೂಡಲೇ ಸುಸರ್ಜಿತವಾದ ಶಾಲೆಗಳನ್ನು ಕಟ್ಟುವ ನಿರೀಕ್ಷೆ ಇದೆ, ಇದರ ಜೊತೆಗೆ ಬಹುದಿನಗಳ ಕನಸಾಗಿದ್ದಂತ ಗುರುಭವನ ಹೈಟೆಕ್ ಮಾದರಿಯಲ್ಲಿ ನಿರ್ಮಾಣ ಮಾಡಬೇಕೆನ್ನುವುದು ಬಹುತೇಕ ಶಿಕ್ಷಕರ ಕನಸಾಗಿದೆ ಇದಕ್ಕೆ ಅಡಿಪಾಯವನ್ನು ಸಹ ಅತಿಶೀಘ್ರದಲ್ಲೇ ಮಾಡಲಾಗುವುದು ಎಂದು ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ಮಾತನಾಡಿ ಸರ್ಕಾರಿ ಕೆಲಸ ದೇವರ ಕೆಲಸ ಎಂಬಂತೆ ಪ್ರಾಥಮಿಕ ಶಾಲಾ ಶಿಕ್ಷಕರು ತಮ್ಮ ಕಾರ್ಯವನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಸರ್ಕಾರದ ವಿವಿಧ ರೀತಿಯ ಕಾರ್ಯಗಳ ನಿಯೋಜನೆಯಿಂದ ಮಕ್ಕಳ ಕಲಿಕೆಯ ಮೇಲೆ ತೊಡಕುಂಟು ಮಾಡುತ್ತದೆ ಇತರ ಇಲಾಖೆ ನೌಕರರನ್ನು ಚುನಾವಣಾ ಗಣತಿ ಕಾರ್ಯಕ್ಕೆ ತೊಡಗಿಸಿಕೊಳ್ಳಲಿ ಎಂದು ತಿಳಿಸಿದರು.
ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜಿಲ್ಲಾಧ್ಯಕ್ಷ ಜಿ.ಬಿ ಮಹಾಂತೇಶ್ ಮಾತನಾಡಿ ಅಂಗನವಾಡಿಯ ನಂತರ ವ್ಯಾಸಂಗದ ವೃತ್ತಿ ಪ್ರಾಥಮಿಕ ಶಾಲೆಯಲ್ಲಿ ನಡೆಯುವಂತದ್ದು , ಆಟವಾಡುವ ವಯಸ್ಸಿನಲ್ಲಿ ಮಕ್ಕಳನ್ನು ಕೇಂದ್ರಿಕೃತಗೊಳಿಸಿ ಪಾಠ ಪ್ರವಚನಗಳನ್ನು ಮಾಡುವುದು ಅತ್ಯಂತ ಕಠಿಣವಾದ ಕೆಲಸ ಆದರೆ ನಮ್ಮ ಶಿಕ್ಷಕರು ಮಕ್ಕಳ ಮನಸ್ಥಿತಿಗಳನ್ನು ಅರ್ಥೈಸಿಕೊಂಡು ಅವರಿಗೆ ಪಾಠ ಪ್ರವಚನಗಳನ್ನು ಮಾಡುತ್ತಿದ್ದಾರೆ, ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆಯ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸಾಕಷ್ಟು ಶಿಕ್ಷಕರು ವಯಕ್ತಿಕವಾಗಿಯೂ ಸಹ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುತ್ತಿರುವುದು ಅತ್ಯಂತ ಸಂತಸದ ವಿಚಾರವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ದೈಹಿಕ ಶಿಕ್ಷಣದ ನಿರ್ದೇಶಕ ಚಿದಾನಂದ ಸ್ವಾಮಿ, ಪ್ರೌಢಶಾಲೆ ಸಹ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಶಿವಣ್ಣ,
ಜಿಲ್ಲಾ ಅಕ್ಷರ ದಾಸೋಹ ಸಹ ನಿರ್ದೇಶಕರು ಗುರುರಾಜ್, ಜಿಲ್ಲಾ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಮಾಲ್ತೇಶ್ ಮುದ್ದಾಜಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರಾದ ಗುರುನಾಥ್, ಕಾರ್ಯದರ್ಶಿ ಲತಾ, ಉಪಾಧ್ಯಕ್ಷರಾದ ವಸಂತಿ ಹಾಗೂಶಿಕ್ಷಕರಾದ ಲೋಲಕ್ಷ್ಮ, ಮೀನಾಕ್ಷಮ್ಮ, ಕೆಂಚಪ್ಪ ಬೈರೇಶ್, ಅಜಯ್, ರಾಜಪ್ಪ, ಮಹೇಶ್ ಹಾಗೂ ಇತರರು ಇದ್ದರು.
