ಚಳ್ಳಕೆರೆ-22 ದಿನೆ,ದಿನೇ ಏರುತ್ತಿರುವ ನೆತ್ತಿ ಸುಡುವ ಬಿಸಿಲು, ಬಾನಿನಿಂದ ಧರೆಗೆ ಬೆಂಕಿ ಸುರಿಯುವಷ್ಟು ಉಷ್ಣತೆ ಪ್ರತಿನಿತ್ಯ ಭಾಸವಾಗಿತ್ತಿದೆ. ಜನರು ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ತಂಪುಪಾನಿಯ, ಕಲಂಗಡಿ, ಎಳನೀರು, ತಾಳೆಕಾಯಿಯತ್ತ ಮೊರೆ ಹೋಗುತ್ತಿದ್ದಾರೆ. ಇದರ ಜೊತೆಯಲ್ಲಿ ತಾಲೂಕಿನ ಅತ್ಯಂತ 40 ಡಿಗ್ರಿ ಎಷ್ಟು ತಾಪಮಾನ ಹೆಚ್ಚಿ ಜನ, ಜಾನುವಾರುಗಳನ್ನ ಹೈರಾಣಾಗಿಸಿದೆ.
ಪ್ರತಿನಿತ್ಯ ಬಿಸಿಲು ಏರಿದಂತೆ ಧರೆ ಕಾದಕಾವಲಿಯಂತಾಗಿ ಉಷ್ಣಾಂಶ ಹೆಚ್ಚಿದೆ, ಬಿಸಿಗಾಳಿಯಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಮನುಷ್ಯರಿಗೆ ಮಾತ್ರವಲ್ಲದೆ ಜಾನುವಾರುಗಳು ಸಹ ಬಿಸಿಲಿನ ತಾಪಕ್ಕೆ ನರಳಿ ಹೋಗಿವೆ. ಉಷ್ಟಾಂಶ ಏರಿಕೆಯಿಂದ ಆರೋಗ್ಯದ ಮೇಲೆಕೆಟ್ಟ ಪರಿಣಾಮ ಬೀರುತ್ತಿದೆ. ಸುಡುಬಿಸಿಲಿನಿಂದ ತಪ್ಪಿಸಿಕೊಳ್ಳುಲು ನೆರಳು ಹುಡುಕಾಟ ಸ್ಥಿತಿ ನಗರದಲ್ಲಿದೆ.
ನೀರು, ನೆರಳಿಗೆ ಹುಡುಕಾಟ ;- ಆಂದ್ರಗಡಿಭಾಗಕ್ಕೆ ಹೊಂದಿಕೊಂಡಿರುವ ಚಳ್ಳಕೆರೆ ತಾಲ್ಲೂಕಿಗೆ ಪ್ರತಿನಿತ್ಯ ಸುತ್ತಮುತ್ತಲ 40ಗ್ರಾಮಗಳಿಂದ ನೂರಾರು ಜನರು ವಿವಿಧ ಕೆಲಸ ಕಾರ್ಯಗಳಿಗೆ, ಶಾಲಾ ಲಾಲೇಜಿಗೆ ಬರುತ್ತಾರೆ. ನಗರಕ್ಕೆ ಬರುವ ಜನರಿಗೆ ನೀರು, ನೆರಳಿನ ವ್ಯವಸ್ಥೆಯೇ ಇಲ್ಲವಾಗಿದೆ. ಬಿಸಿಲಿಂದ ಬರುವ ಪ್ರಯಾಣಿಕರಿಗೆ, ಜನರಿಗೆ ನಗರದ ಯಾವ ಭಾಗದಲ್ಲೂ ಕುಡಿಯುವ ನೀರಿನ ವ್ಯವಸ್ಥೆಯೇ ಇಲ್ಲ, ಅದು ಹೋಗಲಿ ವಿವಿಧ ಕೆಲಸಗಳಿಗೆ ಬಂದು ದಣಿವಾರಿಸಿಕೊಳ್ಳಲು ಒಂದಿಷ್ಟು ನೆರಳಿನ ವ್ಯವಸ್ಥೆಯೂ ಇಲ್ಲವಾಗಿದೆ. ಚಿತ್ರದುರ್ಗ, ಬೆಂಗಳೂರು, ಬಳ್ಳಾರಿ, ಪಾವಗಡ ಕಡೆಗೆ ಹೋಗುವ ಪ್ರಯಾಣಿಕರು ನಿಂತುಕೊಳ್ಳಲು ಒಂದು ತಂಗುದಾಣವೂ ಇಲ್ಲದೆ ಜನರು ಬಿಸಿಲಿನಲ್ಲೇ ಇರುವ ಸ್ಥಿತಿ ನಗರದಲ್ಲಿದೆ. ದಣಿವಾರಿಸಿಕೊಳ್ಳು ನಗರಸಭೆ ಎಲ್ಲೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ, ನೀರು ಕುಡಿಯಬೇಕಾದರೆ ಬೇಕರಿ,ಅಂಗಡಿಗಳಲ್ಲಿ ಹಣ ಕೊಟ್ಟೆ ಕುಡಿಯುವ ಪರಿಸ್ಥಿತಿ ಜನರದ್ದು. ಹಲವಾರು ಭಾರಿ ನಗರಸಭೆ ಆಡಳಿತದಿಂದ ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳದಲ್ಲಿ ಕುಡಿಯುವ ನೀರಿನ ಘಟಕ ಪ್ರಾರಂಭಸಿಲು ಮನವಿ ಮಾಡಿದರೂ ಯಾರೂ ತಲೆಕೆಡಿಸಿಕೊಂಡಿಲ್ಲ, ಕೆಲವೊಂದು ಕಡೆ ತೆರೆದಿದ್ದರೂ ಅವುಗಳ ನಿರ್ವಹಣೆ ಇಲ್ಲದೆ ಆಳಾಗಿವೆ.
ಅರವಟಿಕೆ ಕಣ್ಮರೆ :-
ಕಳೆದ ಸುಮಾರು ವರ್ಷಗಳಿಂದ ಈ ಭಾಗದ ವಿವಿಧ ಸಂಘ, ಸಂಸ್ಥೆಗಳ ಪ್ರತಿನಿಧಿಗಳು ಬೇಸಿಗೆ ಸಮಯದಲ್ಲಿ ಅರವಟಿಕೆ ಪ್ರಾರಂಭಸಿ ಜನರಿಗೆ ತಣ್ಣನೆ ನೀರು ನೀಡುತ್ತಿದ್ದರು. ಆದರೆ, ಈ ಭಾರಿಗೆ ಆ ವ್ಯವಸ್ಥೆ ಇಲ್ಲದೆ ಜನರು ನೀರಿನ ಬವಣೆಯಿಂದ ನಲುಗುತ್ತಿದ್ದಾರೆ. ಕಳೆದ ಹತ್ತಾರು ವರ್ಷಗಳಿಂದ ಅರವಟಿಕೆ ಸ್ಥಾಪಿಸಿದ್ದ ಸಂಘದವರು ಈ ಬಾರಿ ಯಾಕೆಮಾಡಿಲ್ಲವೆಂದು ಜನರ ಪ್ರಶ್ನೆಯಾಗಿದೆ. ಅತ್ತ ನಗರಸಭೆ ಅಧಿಕಾರಿಗಳೂ ತಲೆಕೆಡಿಸಿಕೊಂಡಿಲ್ಲ, ಇತ್ತ ಸಂಘ, ಸಂಸ್ಥೆಯವರು ಸುಮ್ಮನಿದ್ದಾರೆ ಇದರ ಮಧ್ಯದಲ್ಲಿ ಜನರು ಬೇಸಿಗೆ ಝಳಕ್ಕೆ ನಿತ್ರಾಣವಾಗಿದ್ದಾರೆ. ಕೆಲಸ ಕಾರ್ಯಕ್ಕೆ ಕಚೇರಿಗಳಿಗೆ ಬರುವ ಜನರಿಗೆ ರಸ್ತೆಯಲ್ಲಿ ಬಿಡಿ ಯಾವ ಸರ್ಕಾರಿ ಕಚೇರಿಯಲ್ಲೂ ನೀರಿನ ವ್ಯವಸ್ಥೆ ಮಾಡಿಲ್ಲ. ಕುಡಿಯುವ ನೀರಿ ಅವಣಿಸುವ ಪರಿಸ್ಥಿತಿ ಜನರದ್ದು.
ಬಿಸಿಲಿನಿಂದ ತಪ್ಪಿಸಿಕೊಳ್ಳು ಬೈಕ್ ಗೆ ರೂಫ್ ;-
ನಗರದಲ್ಲಿ ಏರುತ್ತಿರುವ ಬಿಸಿಲು ತಾಪದಿಂದ ತಪ್ಪಿಸಿಕೊಳ್ಳಲು ಜನರು ವಿವಿಧ ಪ್ಲಾನ್ ಮಾಡುತ್ತಿದ್ದಾರೆ. ಇಲ್ಲಿನಉದ್ಯಮಿ ಮಾರುತೇಶ್ ತಮ್ಮ ಬೈಕಿಗೆ ರೂಫ್ ಸಿದ್ಧಪಡಿಸಿ ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಕಡಿಮೆ ಹಣದಲ್ಲೇ ರೂಫ್ ನ್ನು ತಮ್ಮ ಸ್ಕೂಟಿಗೆ ರೆಡಿಮಾಡಿಸಿದ್ದಾರೆ. ಇದರಿಂದ ನೆತ್ತಿಸುಡುವ ಬಿಸಿಲಿನ ತಪ್ಪಿಸಿಕೊಂಡಿದ್ದೇನೆ ಎನ್ನುತ್ತಾರೆ. ಮುಂಜಾನೆ 8ರಿಂದಲೇ ನೆತ್ತಿಸುಡುವ ಬಿಸಿಲು ಪ್ರಾರಂಭವಾಗುತ್ತದೆ. ಮಧ್ಯಾಹ್ನ ವೇಳೆಗೆ ಜನರು ಮನೆಯಿಂದ ಹೊರಬರುವುದೇ ಕಷ್ಟವಾಗಿದೆ. 1ರಿಂದ3ಗಂಟೆವರೆಗೂ ಜನರು ರಸ್ತೆಗಿಳಿಯದ ಕಾರಣ ನಗರದ ಹಲವಾರು ರಸ್ತೆಗಳು ಜನರಿಲ್ಲದೆ ಬಿಕೋ ಎನ್ನುತ್ತಿವೆ.
ವ್ಯಾಪಾರದಲ್ಲಿ ಕುಂಠಿತ;- ಬಿಸಿಲಿನ ತಾಪಮಾನ ಏರಿಕೆಯಿಂದ ಗ್ರಾಮೀಣ ಭಾಗದ ಜನರು ನಗರಕ್ಕೆ ಬರುವುದು ಕಡಿಮೆಯಾಗಿದೆ. ಇದರಿಂದ ಬೀದಿ ಬದಿಯಲ್ಲಿ ಸಣ್ಣ,ಪುಟ್ಟ ವ್ಯಾಪಾರ ಮಾಡುವ ನಮಗೆ ಸಂಕಷ್ಟ ಎದುರಾಗಿದೆ. ಪ್ರತಿನಿತ್ಯವೂ 500ರೂ ದುಡಿಯುವುದೇ ಕಷ್ಟವಾಗುತ್ತಿದೆ. ನಗರಕ್ಕೆ ಬರುವ ಜನರ ಸಂಖ್ಯೆ ದಿನೆ, ದಿನೇ ಕುಂಠಿತಗೊಳ್ಳುತ್ತಿದ್ದು, ಶಾಲಾ-ಕಾಲೇಜುಗಳು ರಜೆ ಇರುವ ಕಾರಣ ವ್ಯಾಪಾರವೂ ಸಹ ಕಡಿಮೆಯಾಗಿದೆ. ಬೀದಿಬದಿಯಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡುವ ನಮ್ಮಂತ ಕುಟುಂಬಗಳು ಕಷ್ಟಕ್ಕೆ ಸಿಲುಕಿವೆ ಎನ್ನುತ್ತಾರೆ ಬೀದಿಬದಿ ವ್ಯಾಪಾರಿ ಜಯಣ್ಣ.
ಕೋಟ್ :-
ಬಿರುಬಿಸಿಲು ನೆತ್ತಿಸುಡುವ ಬಿಸಿಲಿನಲ್ಲಿ ನಾನು ಕೆಲಸಮಾಡುವ ಸ್ಥಳಕ್ಕೆ ದೂರವಿದೆ.ಪ್ರತಿನಿತ್ಯವೂ ಓಡಾಟ ಮಾಡಲು ಸಾಧ್ಯವಾಗದ ಕಾರಣ ನಾನು ಬೈಕ್ ಗೆ ರೂಫ್ ಮಾಡಿಸಿದ್ದೇನೆ. ಈಗ ಎಲ್ಲಾ ಸಮಯದಲ್ಲೂ ಓಡಾಟ ನಡೆಸಲು ಅನುಕೂಲವಾಗಿದೆ. ಕಡಿಮೆ ವೆಚ್ಚದಲ್ಲಿ ರೂಫ್ ಸಿದ್ದಪಡಿಸಿಕೊಂಡಿದ್ದೇನೆ. ಇದರಿಂದ ನಮ್ಮ ವ್ಯವಹಾರಕ್ಕೆ ಹಾಗೂ ಓಡಾಟಕ್ಕೆ ಅನುಕೂಲವಾಗಿದೆ.
ಮಾರುತೇಶ್ ಉದ್ಯಮಿ.
ಪ್ರತಿನಿತ್ಯ ಗ್ರಾಮೀಣ ಭಾಗದಿಂದ ನಗರಕ್ಕೆ ಬಂದು ವ್ಯಾಪಾರ ಮಾಡುವ ನಮಗೆ ಬಿಸಿಲಿನ ಏರಿಕೆಯಿಂದ ಕಷ್ಟವಾಗುತ್ತಿದೆ. ಬೀದಿಬದಿಯಲ್ಲಿ ಕುಳಿತು ವ್ಯಾಪಾರ ಮಾಡುವ ನಮಗೆ ನೆರಳು, ನೀರಿನ ವ್ಯವಸ್ಥೆ ನಗರದಲ್ಲಿ ಇಲ್ಲ. ಬಂದು ಹೋಗುವ ಜನರು ನೀರಿಗಾಗಿ ಪರದಾಟ ನಡೆಸುತ್ತಾರೆ. ಹೋಟೆಲ್, ಅಂಗಡಿಯವರು ನೀರು ಕೊಡಲು ಹಿಂಜರಿಯುತ್ತಾರೆ. ಕುಡಿಯುವ ನೀರು, ನೆರಳಿನ ವ್ಯವಸ್ಥೆ ಅಗತ್ಯವಾಗಿ ಬೇಕಿದೆ.
ಗಜೇಂದ್ರ ಬೀದಿಬದಿ ವ್ಯಾಪಾರಿ.
